ಸಾರಾಂಶ
ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯೆ ನೀಡಿದ ಗುರುಗಳನ್ನು ಸ್ಮರಿಸುವ ಮೂಲಕ ಶಾಲೆಯ ಹಳೆಯ ನೆನಪುಗಳು, ಪರಿಶ್ರಮ, ಶಿಕ್ಷಣದ ಮಹತ್ವ ಹಾಗೂ ಗುರುವಿನ ಶ್ರೇಷ್ಠತೆಯನ್ನು ತಿಳಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ.ನಾಗಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಹಳೆ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯೆ ನೀಡಿದ ಗುರುಗಳನ್ನು ಸ್ಮರಿಸುವ ಮೂಲಕ ಶಾಲೆಯ ಹಳೆಯ ನೆನಪುಗಳು, ಪರಿಶ್ರಮ, ಶಿಕ್ಷಣದ ಮಹತ್ವ ಹಾಗೂ ಗುರುವಿನ ಶ್ರೇಷ್ಠತೆಯನ್ನು ತಿಳಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ.ನಾಗಪ್ಪ ತಿಳಿಸಿದರು.ಪಟ್ಟಣದ ಕಾಳಿದಾಸ ಪೌಢಶಾಲೆಯಲ್ಲಿ ೧೯೯೩ನೇ ಸಾಲಿನ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಈ ಕಾರ್ಯಕ್ರಮದಿಂದ ಅಕ್ಷರ ಕಲಿಸಿದ ಗುರುಗಳ ಕುರಿತು ವಿದ್ಯಾರ್ಥಿಗಳು ಹೊಂದಿರುವ ಗೌರವ, ಪ್ರೀತಿ ವಿಶ್ವಾಸ ಹಾಗೂ ಹಳೆ ವಿದ್ಯಾರ್ಥಿಗಳು ಒಂದಡೆ ಸೇರಿ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಲು ಇದೊಂದು ಒಳ್ಳೆಯ ಸಂದರ್ಭ ಎಂದ ಅವರು, ಕಾಳಿದಾಸ ಪೌಢಶಾಲೆ ೧೯೭೫ ರಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ೭೫೦ ಕ್ಕೂ ಹೆಚ್ಚು ವಿದ್ಯಾಥಿಗಳು ದಾಖಲಾತಿಯಾಗಿ ತಾಲೂಕು ಮತ್ತು ಜಿಲ್ಲೆಯಲ್ಲಿಯೇ ಉತ್ತಮ ಶಾಲೆ ಎಂಬ ಹೆಸರು ಗಳಿಸಿದೆ. ಇತಿಹಾಸವನ್ನು ನೆನೆದು ಮುಂದಿನ ದಿನಗಳಲ್ಲಿಯೂ ಪ್ರಸ್ತುತ ಕಾರ್ಯನಿರ್ವಹಿಸುವ ಶಿಕ್ಷಕ ವೃಂದ ಶಾಲೆಯ ಹೆಸರು ಉಳಿಸುವಂತೆ ಕಿವಿಮಾತು ಹೇಳಿದರು. ಹಿರಿಯ ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಮಾತನಾಡಿ ೧೯೯೩ ನೇ ಸಾಲಿನ ಹತ್ತನೇ ತರಗತಿ ಎ ವಿಭಾಗದ ವಿದ್ಯಾರ್ಥಿಗಳು ಗುರುಗಳನ್ನು ಸ್ಮರಿಸುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿದ್ದು ಗುರು-ಶಿಷ್ಯರ ಸಂಬಂಧ ದೊಡ್ಡದು ಎಂದು ನಿರೂಪಿಸಿದ್ದಾರೆ ಎಂದರು. ಶಾಲೆಯ ಹಳೆ ವಿದ್ಯಾರ್ಥಿ ಎಂ.ಎಸ್.ಸೈಪುಲ್ಲಾ ಮಾತನಾಡಿ ನಮ್ಮ ಶಾಲಾ ಅವಧಿಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಲುಗಳು ಕಣ್ಣುಮಂದೆ ಬರುವಂತೆ ಮಾಡಿದೆ ಎಂದು ತಿಳಿಸಿದರು. ಹಳೇ ವಿದ್ಯಾರ್ಥಿ ಮಲ್ಲಿಕಾರ್ಜುನ್ ಮಾತನಾಡಿ, ತಾಯಿಯಿಂದ ಉಸಿರು ಬರುತ್ತದೆ, ತಂದೆಯಿಂದ ಹೆಸರು ಬರುತ್ತದೆ, ಆದರೆ ಗುರುವಿನಿಂದ ಉಸಿರು ಇರೋವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ, ಬದುಕಿನ ಮೌಲ್ಯ ತಿಳಿಸುವ ಶಿಕ್ಷಕರನ್ನು ಸ್ಮರಿಸುವ ಹಾಗೂ ಗೌರವಿಸುವ ಅವಕಾಶ ನಮಗೆ ದೊರೆತಿದ್ದು ನಮ್ಮ ಸೌಭಾಗ್ಯ ಎಂದರು.ಕಾರ್ಯಕ್ರಮದಲ್ಲಿ ೧೯೯೩ ನೇ ಸಾಲಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಹಿರಿಯ ಶಿಕ್ಷಕರುಗಳಾದ ಕನ್ನಡ ನಿವೃತ್ತ ಶಿಕ್ಷಕ ಮಲ್ಲೇಶಯ್ಯ, ಜಿ.ಶಿವಣ್ಣ, ಜಿ.ಸಾವಿತ್ರಮ್ಮ, ಕೆ.ವಿ.ತಿಮ್ಮಾಜಮ್ಮ, ರಾಮಕೃಷ್ಣಯ್ಯ, ಎನ್.ಪದ್ಮನಾಭಯ್ಯ, ರಂಗಶ್ಯಾಮಯ್ಯ ಅವರನ್ನು ಗೌರವಿಸಿದರು. ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಡಿ.ನಾಗಭೂಷಣ್, ಮುಖ್ಯ ಶಿಕ್ಷಕಿ ಸೀತಾದೇವಿ, ಶಾಲೆಗೆ ಕಂಪ್ಯೂಟರ್ಗಳನ್ನು ನೀಡಿದ ಹಳೆ ವಿದ್ಯಾರ್ಥಿ ಬಾಲಾಜಿ ದರ್ಶನ್ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ೧೯೯೩ ನೇ ಸಾಲಿನ ಹಳೆ ವಿದ್ಯಾರ್ಥಿಗಳಾದ ಎಂ.ಪಿ.ಸತೀಶ್, ಪ್ರಸನ್ನಕುಮಾರ್, ಕಂದಾಯ ಇಲಾಖೆಯ ನಟರಾಜು, ಡಾ.ರೇಣುಕಾ, ಹೇಮಮಾಲಿನಿ, ಎಂ.ವೀಣಾಶ್ರೀ, ಇಂದ್ರಾಣಿ, ಗೀತಾ, ಫಾತಿಮಾ ಬೇಗಂ, ಶ್ರೀನಿವಾಸ್, ವಿನಯ್, ಲಕ್ಷ್ಮೀಪ್ರಸಾದ್, ಸೈಯದ್ಗೌಸ್, ಅಜ್ಗರ್ಭಾಷಾ ಮೋಹನ್ ಸೇರಿದಂತೆ ಅನೇಕರಿದ್ದರು.