ಸಂತ್ರಸ್ತೆ ಹೆಸರು-ಫೋಟೋ ಬಹಿರಂಗಪಡಿಸಿದ ಆತನ ತಾಯಿ ರಜಿಯಾ ಬೇಗಂ, ವಿಶ್ವ ಮುಸ್ಲಿಂ ಪರಿಷತ್ ಅಧ್ಯಕ್ಷ ಸುಭಾನ್ ಖಾನ್ ಇತರರ ವಿರುದ್ಧವೂ ದೂರು ದಾಖಲಾಗಲಿದ್ದು, ಮತ್ತಷ್ಟು ಸಂತ್ರಸ್ತೆಯರು ದೂರು ದಾಖಲಿಸಲಿದ್ದಾರೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಪವರ್ ಫಿಟ್ನೆಸ್ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧ ಅತ್ಯಾಚಾರ, ಬೆದರಿಕೆ ಸೇರಿದಂತೆ ಸಂತ್ರಸ್ತೆನೀಡಿದ ದೂರಿನಂತೆ ಬಿಎನ್ಎಸ್ ಕಾಯ್ದೆ 2023ರಡಿ ಯು/ಎಸ್ 64 (2) (ಎಂ), 351(2), 77ರಡಿ ಎಫ್ಐಆರ್ ಆಗಿದ್ದು, ಸಂತ್ರಸ್ತೆ ಹೆಸರು-ಫೋಟೋ ಬಹಿರಂಗಪಡಿಸಿದ ಆತನ ತಾಯಿ ರಜಿಯಾ ಬೇಗಂ, ವಿಶ್ವ ಮುಸ್ಲಿಂ ಪರಿಷತ್ ಅಧ್ಯಕ್ಷ ಸುಭಾನ್ ಖಾನ್ ಇತರರ ವಿರುದ್ಧವೂ ದೂರು ದಾಖಲಾಗಲಿದ್ದು, ಮತ್ತಷ್ಟು ಸಂತ್ರಸ್ತೆಯರು ದೂರು ದಾಖಲಿಸಲಿದ್ದಾರೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಮ್, ಫಿಟ್ನೆಸ್ ಅಂತೆಲ್ಲಾ ಹೋಗಿ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಜಿಮ್ ಜಿಹಾದ್ಗೆ ಬಲಿಯಾಗುತ್ತಿದ್ದಾರೆ. ಪವರ್ ಫಿಟ್ನೆಸ್ ಜಿಮ್ ಟ್ರೈನರ್ ಇಸ್ಮಾಯಿಲ್ ವಿರುದ್ಧ ಮಂಗಳವಾರ ತಡರಾತ್ರಿ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಜಿಲ್ಲಾಸ್ಪತ್ರೆಗೆ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ದಾಖಲಿಸಿದ್ದಾರೆ ಎಂದರು.
ರಜಿಯಾ ಬೇಗಂ, ಸುಭಾನ್ ಸಾಬ್ ಇತರರು ಸಂತ್ರಸ್ತ ಮಹಿಳೆಯ ಫೋಟೋ, ಹೆಸರು ಬಹಿರಂಗಪಡಿಸಿದ್ದು ಖಂಡನೀಯ. ಆಕಸ್ಮಾತ್ ಹೀಗೆ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ, ನಿಮ್ಮ ಪತ್ನಿ, ಅಕ್ಕ ತಂಗಿಯರಿಗೆ ಹೀಗಾಗಿದ್ದರೆ ಇದೇ ರೀತಿ ನಡೆದುಕೊಳ್ಳುತ್ತಿದ್ದಿರಾ? ಹಿಂದೆ ಪಕ್ಕದ ಮನೆ ಮುಸ್ಲಿಂ ಯುವತಿಗೆ ಲಿಫ್ಟ್ ಕೊಟ್ಟ ಕಾರಣಕ್ಕೆ ಹಿಂದೂ ಯುವಕನನ್ನು ಜಾಗವೊಂದಕ್ಕೆ ಕರೆದೊಯ್ದು, ಮಾರಣಾಂತಿಕ ಹಲ್ಲೆ ಮಾಡಿ, ಸತ್ತನೆಂದು ಬಿಸಾಡಿ ಹೋಗಿದ್ದರಲ್ಲ ಅವಾಗ ಸುಭಾನ್ ಖಾನ್, ಭ್ರಾತೃತ್ವದ ಬಗ್ಗೆ ಹೇಳುವ ಅನೀಸ್ ಪಾಷಾರಂತಹವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಮಾತನಾಡಿ, ನಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡಿರುವ ವಿಶ್ವ ಮುಸ್ಲಿಂ ಪರಿಷತ್ ಅಧ್ಯಕ್ಷ ಸುಭಾನ್ ಖಾನ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಬ್ಲ್ಯಾಕ್ ಮೇಲ್, ಇಸ್ಪೀಟ್ ದಂಧೆ, ಮಾಮೂಲಿ ವಸೂಲಿ ಹಾಗೂ ಅದಕ್ಕೂ ಹಿಂದೆ ಎಂತೆಂತಹ ಕೇಸ್ ಇವೆ ಎಂಬುದು ಸಹ ಜನರಿಗೆ ಗೊತ್ತಿದೆ. ನಾನು ಯಾರಿಂದಲಾದರೂ ಒಂದು ರು. ಹಣ ಪಡೆದಿದ್ದರೆ ಸಾಬೀತುಪಡಿಸಲಿ. ದಾವಣಗೆರೆ ಗಾಂಧಿ ವೃತ್ತದಲ್ಲಿ ಸಾರ್ವಜನಿಕವಾಗಿ ಚರ್ಚೆಗೆ ನಾವು ಸಿದ್ಧ. ಸುಭಾನ್ ಖಾನ್ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸಂಘಟನೆಗಳ ಮುಖಂಡರಾದ ಪಿ.ಸಾಗರ್, ಶ್ರೀಧರ, ವೆಂಕಟೇಶ ನಾಯಕ್, ಶಿವರಾಜ ಪೂಜಾರ್, ರಘುವರ್, ರಾಜು ದೊಡ್ಡಮನಿ, ಸೋಮಶೇಖರ ಇತರರು ಇದ್ದರು.ನಾನು ಬೈಂದೂರಿನವರು, ಮಣಿ ಸರ್ಕಾರ್ ತಮಿಳುನಾಡಿನ ಮೂಲದವರು ಅಂತೆಲ್ಲಾ ಸುಭಾನ್ ಖಾನ್ ಟೀಕಿಸಿದ್ದಾರೆ. ನಾವು, ನಮ್ಮ ಅಪ್ಪ ಇಲ್ಲಿಯೇ ಹುಟ್ಟಿ ಬೆಳೆದವರು. ನಾವು ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಹೋರಾಟ ಮಾಡಿದ್ದೇವೆ. ಜೆ.ಎಚ್.ಪಟೇಲರ ಕಾಲದಲ್ಲಿ, ದಾವಣಗೆರೆ ಮಂಡಕ್ಕಿ ಭಟ್ಟಿಯಲ್ಲಿ ಸಿಕ್ಕಿ ಬಿದ್ದ ಶಂಕಿತ ಉಗ್ರ, ಹರಿಹರ ತಾ. ಬನ್ನಿಕೋಡಿನಲ್ಲಿ ಸಿಕ್ಕಿ ಬಿದ್ದ ಶಂಕಿತ ಉಗ್ರ ಯಾರು ಸುಭಾನ್ ಖಾನ್? ಹಿಂದೂ ಹೆಣ್ಣು ಮಕ್ಕಳೆಂದರೆ ನೀವೆಲ್ಲಾ ಏನಂದುಕೊಂಡಿದ್ದೀರಿ? ಇನ್ನು ಜಿಮ್ ಜಿಹಾದ್, ಲವ್ ಜಿಹಾದ್ಗಳನ್ನೆಲ್ಲಾ ಸಹಿಸುವುದಿಲ್ಲ.
ಸತೀಶ ಪೂಜಾರಿ ಪ್ರಾಂತ್ಯ ಸಂಚಾಲಕ, ಹಿಂಜಾವೇ.ಜಿಮ್-ಫಿಟ್ನೆಸ್ ಕ್ಲಬ್ಗಳಲ್ಲಿ ಟ್ರೈನರ್ಗಳಿಂದ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರಿಗೆ ಆಗುತ್ತಿರುವ ದೌರ್ಜನ್ಯ, ಬ್ಲ್ಯಾಕ್ ಮೇಲ್, ಶೋಷಣೆ ಬಗ್ಗೆ ಕನ್ನಡಪ್ರಭ ಕಳೆದ ಐದು ದಿನಗಳಿಂದ ನಿರಂತರ ವರದಿ ಮಾಡಿದ ಪರಿಣಾಮ ಪೊಲೀಸ್ ಇಲಾಖೆಯೂ ಎಚ್ಚೆತ್ತುಕೊಂಡಿದೆ. ಅದೆಷ್ಟೋ ಕುಟುಂಬಗಳು, ಹೆತ್ತವರು, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹಿತ ಜಾಗೃತರಾಗಿದ್ದಾರೆ. ಇಂತಹದ್ದೊಂದು ಜಾಗೃತಿ ಮೂಡಿಸಿದ ಕನ್ನಡಪ್ರಭಕ್ಕೆ ಎಲ್ಲರ ಪರವಾಗಿ ಅಭಿನಂದಿಸುತ್ತೇವೆ.
ಮಣಿ ಸರ್ಕಾರ್ ಜಿಲ್ಲಾಧ್ಯಕ್ಷ, ಶ್ರೀರಾಮ ಸೇನೆ.