ಎಚ್.ವಿಶ್ವನಾಥ್ ಅವರು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಕೋಟ್ಯಂತರ ಅನುದಾನ. ತಂದು ಶಾಲೆಗಳ ಜೀರ್ಣೋದ್ದಾರ ಮಾಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವಂತೆ ಇದ್ದವು. ಅವುಗಳನ್ನು ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಸರ್ಕಾರಿ ಶಾಲೆಗಳ ಕಡೆ ಜನರು ತಿರುಗಿನೋಡುವಂತೆ ಮಾಡಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ರಾಜ್ಯದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೊಸ ರೂಪ ಕೊಟ್ಟು, ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಶಿಕ್ಷಣ ಮತ್ತು ಸಹಕಾರ ಮಂತ್ರಿಯಾಗಿ ದೇಶವೇ ತಿರುಗಿ ನೋಡುವಂತೆ ಶಾಲೆಗಳಲ್ಲಿ ಬಿಸಿಯೂಟ ಹಾಗೂ ಯಶಸ್ವಿನಿ ಯೋಜನೆ ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ದಾರಿದೀಪವಾದವರು ಎಚ್.ವಿಶ್ವನಾಥ್ ಅವರು ಎಂದು ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್ ಬಣ್ಣಿಸಿದರು.ಪಟ್ಟಣದ ಖ್ಯಾತ ಮೂಳೆ ತಜ್ಞ ಡಾ. ಮೆಹಬೂಬ್ ಖಾನ್ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರನ್ನು 79 ನೇ ವರ್ಷದ ಹುಟ್ಟುಹಬ್ಬಅಂಗವಾಗಿ ಅಭಿಮಾನಿಗಳು, ಹಿತೈಷಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.
ಎಚ್.ವಿಶ್ವನಾಥ್ ಅವರು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಕೋಟ್ಯಂತರ ಅನುದಾನ. ತಂದು ಶಾಲೆಗಳ ಜೀರ್ಣೋದ್ದಾರ ಮಾಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವಂತೆ ಇದ್ದವು. ಅವುಗಳನ್ನು ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಸರ್ಕಾರಿ ಶಾಲೆಗಳ ಕಡೆ ಜನರು ತಿರುಗಿನೋಡುವಂತೆ ಮಾಡಿದ್ದಾಗಿ ಹೇಳಿದರು.ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿ ವಿಭಿನ್ನವಾದ ಯೋಜನೆಗಳನ್ನು ಜಾರಿಗೆ ತಂದರೆ, ಸಹಕಾರ ಸಚಿವರಾಗಿ ಮುಚ್ಚಿ ಹೋಗಿದ್ದ ಸಹಕಾರ ಸಂಘಗಳನ್ನು ಪುನಶ್ವೇತನಗೊಳಿಸಿ, ಹೊಸರೂಪ ನೀಡಿ ರೈತರಿಗೆ ಸಕಾಲದಲ್ಲಿ ಸಾಲ ದೊರೆಯುವಂತೆ ಮಾಡಿದ್ದು ವಿಶ್ವನಾಥ್ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗುತ್ತಿದೆ. ಕನ್ನಡ ಭಾಷೆಯನ್ನು ಜನನಾಯಕರು ಕೊಲೆ ಮಾಡುತ್ತಿದ್ದಾರೆ. ನಾನು 50 ವರ್ಷಗಳಿಂದ ರಾಜಕಾರಣ ನೋಡುತ್ತಾ ಇದ್ದೇನೆ. ನಾನು ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ, ಆಗೆಲ್ಲಾ ಇಂತಹ ಅವ್ಯವಸ್ಥೆ ನೋಡಿರಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿಶ್ವನಾಥ್ ಅಭಿಮಾನಿಗಳು ಹಾಗೂ ಹಿತೈಷಿಗಳು ಬಾರಿ ಗಾತ್ರದ ಹಾರಹಾಕಿ ಅಭಿನಂದಿಸಿ ಶುಭಾಶಯ ಕೋರಿದರು.
ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ಎಂ.ಟಿ. ಕುಮಾರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ನಿವೃತ್ತ ಡಿಡಿಪಿಐ ಜವರೇಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ತಮ್ಮನಾಯಕ್, ಭಾಗ್ಯಲಕ್ಷ್ಮೀ ಸುಬ್ರಹ್ಮಣ್ಯ, ಗೀತಾ ಮಹೇಶ್, ಡಿ. ಕಾಂತರಾಜ್, ಕೆ.ಜಿ. ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಬಾರ್ ಶಿವಕುಮಾರ್, ನಟರಾಜು, ಅಸ್ಲಂಪಾಷ, ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಉಪನ್ಯಾಸಕ ಪ್ರಶಾಂತ್, ಅರ್ಜುನಹಳ್ಳಿ ಶಿವಣ್ಣ ಆಂಜನೇಯ ಬ್ಲಾಕ್ ಮಹದೇವ್, ಜೆಡಿಎಸ್ ಮುಖಂಡರಾದ ಎಚ್.ಪಿ. ಶಿವಣ್ಣ, ಕೃಷ್ಣಶೆಟ್ಟಿ, ಪೆರಿಸ್ವಾಮಿ, ಸುಬ್ಬಕೃಷ್ಣ, ಜ್ಞಾನಾನಂದ್, ಬಿ.ಎಂ. ನಾಗರಾಜ್, ಅಂಗಡಿ ಶಿವಣ್ಣ, ಹೊಸ ಅಗ್ರಹಾರ ಮಂಜುನಾಥ್ ಮೊದಲಾದವರು ಇದ್ದರು.ಇಂದಿನ ರಾಜಕಾರಣ ರಿಪೇರಿ ಆಗಬೇಕು. ಇಲ್ಲವಾದರೆ ಎಲ್ಲರೂ ಸೇರಿ ಜನತಂತ್ರ ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ. ಇಂದು ರಾಜಕಾರಣಿಯ ವೈಚಾರಿಕತೆಗಿಂತ ಆತ ಗೆಲ್ಲುತ್ತಾನಾ, ಗೆಲ್ಲಲು ಶಕ್ತನಿದ್ದಾನಾ ಎಂಬುದೇ ಮುಖ್ಯವಾಗಿದೆ. ನನ್ನ ಸುದೀರ್ಘ 50 ವರ್ಷಗಳ ರಾಜಕೀಯ ಜೀವನದಲ್ಲಿ ಈಗಿನ ರಾಜಕಾರಣದ ವ್ಯವಸ್ಥೆ ಕಂಡಿಲ್ಲ.
- ಎಚ್. ವಿಶ್ವನಾಥ್ ವಿಧಾನಪರಿಷತ್ ಸದಸ್ಯರು