ಧಾರವಾಡ: ಕಲಘಟಗಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಪ್ರಮಾಣದ ಆಲಿಕಲ್ಲು ಮಳೆಯಿಂದ ತೀವ್ರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸರ್ಕಾರದ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್‌ ಘೋಷಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಟನೆಯು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದೆ.

ಆಲಿಕಲ್ಲು ಮಳೆಗೆ ಕಲಘಟಗಿ ರೈತರ ಮಾವು, ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ರೈತರಿಗೆ ತುಂಬಲಾರದ ನಷ್ಟವಾಗಿದೆ. ಇಂತಹ ಸಮಯದಲ್ಲಿ ಕ್ಷೇತ್ರದ ಶಾಸಕರಾದ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಆಗಮಿಸಿ ರೈತರ ಅಳಲು ಸಹ ಕೇಳಿಲ್ಲ. ಈ ಹಿನ್ನೆಲೆಯಲ್ಲಿ ತಾವು ಗಮನಿಸಿ ರೈತರಿಗಾದ ನಷ್ಟ ಪರಿಹರಿಸಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಸಕ್ತ ಸಾಲಿನ ಜಿಲ್ಲೆಯ ಮತ್ತು ಕಲಘಟಗಿ ತಾಲೂಕಿನ ರೈತರು ಹಲವಾರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದು, ಇದುವರೆಗೆ ಬಹುತೇಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಬಿಲ್ ಹಾಕಿಲ್ಲ. ಆದ್ದರಿಂದ ತಾವು ಅಧ್ಯಕ್ಷತೆ ವಹಿಸಿ ರೈತರ ಕಬ್ಬಿನ ಹಣವನ್ನು ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್ ಬೆಳಗಾವ್ಕರ್, ಪರಶುರಾಮ್ ಎತ್ತಿನಗುಡ್ಡ, ಉಳವಪ್ಪ ಬಳಿಗೇರ, ಬಸನಗೌಡ ಸಿದ್ಧನಗೌಡ, ಬಸವನೆಪ್ಪ ಅಡ್ರಗುಂಚಿ, ಸಹದೇವ ಕುಂಬಾರ, ಮಾಳಪ್ಪ ಹೊನ್ನಳ್ಳಿ ಇದ್ದರು.