ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ಹುಬ್ಬಳ್ಳಿಯಲ್ಲಿ ಹಜ್ ಭವನ ನಿರ್ಮಾಣದ ಘೋಷಣೆ ಮಾಡಲು ಶ್ರಮಿಸಿದ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಅನೇಕ ಧರ್ಮಗುರುಗಳು, ಕಾರ್ಯಕರ್ತರು, ಅಭಿಮಾನಿಗಳು ಸನ್ಮಾನಿಸಿದರು.

ಕಿತ್ತೂರು ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹುಬ್ಬಳ್ಳಿಯ ಹಜ್ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಪ್ರಮುಖ ಕಾರಣಿಕರ್ತರು. ಇದೊಂದು ಮಹತ್ವದ ಐತಿಹಾಸಿಕ ಘೋಷಣೆ ಆಗಿದ್ದು ಪೀಠಾಧಿಪತಿಗಳು, ಧರ್ಮಗುರುಗಳು, ಧಾರ್ಮಿಕ ನಾಯಕರುಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಮುಖಂಡರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ತಾಜುದ್ದೀನ್ ಪೀರಾ, ಭಾಷಾಪೀರ್ ದರ್ಗಾದ ಸಜ್ಜಾದ್ ನಸೀನ್ ಧರ್ಮಗುರು, ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಹಮೀದ್ ಕೊಪ್ಪದ್ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ತಮ್ಮ ‌ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿ ಹುಬ್ಬಳ್ಳಿಗೆ ಹಜ್ ಭವನ ನಿರ್ಮಾಣಕ್ಕೆ ‌ಮುಂದಾಗಿದ್ದಾರೆ. ಕಿತ್ತೂರು ಕರ್ನಾಟಕಕ್ಕೆ ಇದು ಬಹಳ ದಿನಗಳ ಕಾಲದ ಬೇಡಿಕೆಯಾಗಿತ್ತು. ಪವಿತ್ರ ಹಜ್ ಯಾತ್ರೆಗೆ ಹೋಗಲು ಯಾತ್ರಾರ್ಥಿಗಳಿಗೆ ಇದು ಬಹಳಷ್ಟು ಅನುಕೂಲ ಆಗಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಡಿ‌. ಮಕಾಂದರ, ಶಹಜಮಾನ್ ಮುಜಾಹಿದ್, ರಶೀದ್ ಎಂ‌. ಶೇಖ್, ಪಠಾಣ, ಇನಾಯತ್ ಖಾನ್ ಪಠಾಣ ಮತ್ತಿತರರು ಉಪಸ್ಥಿತರಿದ್ದರು.