ನರೇಗಾ ಮತ್ತು ರಾಜೀವ್ ಗಾಂಧಿ ಸಶಸ್ತ್ರಿಕರಣ ಯೋಜನೆ ಅಡಿ 99 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬಹು ದಿನಗಳಿಂದ ಸ್ವಂತ ಗ್ರಾಪಂ ಕಟ್ಟಡದ ಕೊರತೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪಂಚಾಯತ್ ಕಾರ್ಯಚಟುವಟಿಕೆಗಳು ನಡೆಯುತ್ತಿದೆ.

ಹಲಗೂರು:

ರಾಷ್ಟ್ರೀಯ ಹೆದ್ದಾರಿಯ ಮುತ್ತತ್ತಿ ಸರ್ಕಲ್‌ನಲ್ಲಿ ನೂತನ ಗ್ರಾಪಂ ಕಚೇರಿ ಮತ್ತು ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಗುರುವಾರ ಬೆಳಗ್ಗೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನರೇಗಾ ಮತ್ತು ರಾಜೀವ್ ಗಾಂಧಿ ಸಶಸ್ತ್ರಿಕರಣ ಯೋಜನೆ ಅಡಿ 99 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬಹು ದಿನಗಳಿಂದ ಸ್ವಂತ ಗ್ರಾಪಂ ಕಟ್ಟಡದ ಕೊರತೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪಂಚಾಯತ್ ಕಾರ್ಯಚಟುವಟಿಕೆಗಳು ನಡೆಯುತ್ತಿದೆ. ಇದೀಗ ನೂತನ ಕಟ್ಟಡ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.

ಇದೇ ವೇಳೆ ಶಾಸಕರನ್ನು ಅವರ ಅಭಿಮಾನಿಗಳು ಸನ್ಮಾನಿಸಿ ಅಭಿನಂದಿಸಿದರು. ಪಂಚಾಯ್ತಿ ಕಟ್ಟಡವನ್ನು ದೀಪಾಲಂಕಾರದಿಂದ ಸಿಂಗರಿಸಿ ಸಂಪ್ರದಾಯದಂತೆ ಅರ್ಚಕ ಉಮೇಶ್‌ ಆರಾಧ್ಯರ ನೇತೃತ್ವದಲ್ಲಿ ಹಸು-ಕರುಗಳನ್ನು ಪ್ರವೇಶಿಸಿ, ಲಕ್ಷ್ಮೀ ಪೂಜೆ ಮತ್ತು ಹೋಮ ಹವನಗಳನ್ನು ನೆರವೇರಿಸಿಸಲಾಯಿತು. ಪೂಜೆ ಪುನಸ್ಕಾರಗಳನ್ನು ನಡೆಸಿದ ನಂತರ ಎಲ್ಲರಿಗೂ ಪ್ರಸಾದ ವಿನಯೊಗಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಅಧಿಕಾರಿ ಕೆ .ಚಂದಿಲ್ ತಿಳಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಬಾನು, ಉಪಾಧ್ಯಕ್ಷೆ ಲತಾ ಸಿ., ಸರ್ವ ಸದಸ್ಯರು, ಗ್ರಾಪಂ ಕಾರ್ಯದರ್ಶಿ ಶಿವಕುಮಾರ್, ಬಿಲ್ ಕಲೆಕ್ಟರ್ ಆನಂದ್, ಗ್ರಂಥಾಲಯ ಪಾಲಕರಾದ ಶಿವನಂಜು, ಅಟೆಂಡರ್ ರಾಜಣ್ಣ ಸೇರಿದಂತೆ, ಗ್ರಾಪಂ ಎಲ್ಲಾ ಸಿಬ್ಬಂದಿ ಹಾಗೂ ಪೌರಕಾರ್ಮಿಕ ಸಿಬ್ಬಂದಿ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಗ್ರಾಪಂ ನೂತನ ಕಟ್ಟಡದಲ್ಲಿ ಸಿಬ್ಬಂದಿಗೆ ಸೀಮಂತ

ಹಲಗೂರು:

ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ನಂತರ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಮತಾ ಅವರಿಗೆ ಮಹಿಳಾ ಸದಸ್ಯರು ಸೀಮಂತ ನೆರವೇರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಮತಾರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ಅವರಿಗೆ ಬಳೆ ತೊಡಿಸುವ ಮುಖಾಂತರ ಅರಿಶಿನ ಕುಂಕುಮ ಜೊತೆಗೆ ಹಣ್ಣು ಹಂಪಲ ನೀಡಿ ಮಡಿಲು ತುಂಬಿದ್ದೇವೆ. ಮಮತರಿಗೆ ದೇವರು ಆರೋಗ್ಯ ಭಾಗ್ಯ ಕರುಣಿಸಲಿ ಎಂದರು.

ಈ ವೇಳೆ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.