ಸಾರಾಂಶ
ಎಚ್.ಎನ್. ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಹಲಗೂರು - ಕನಕಪುರ ರಾಷ್ಟ್ರೀಯ ಹೆದ್ದಾರಿ 209ರ ಮುಖ್ಯರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಂದಾಗಿ ಸಾವು, ನೋವುಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ನೂತನವಾಗಿ ನಿರ್ಮಿಸಿರುವ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಇನ್ನೂ ಅಧಿಕೃತವಾಗಿ ಅನುವು ಮಾಡಿಕೊಟ್ಟಿಲ್ಲವಾದರೂ ಸಹ ಅತಿ ವೇಗವಾಗಿ ಸಂಚರಿಸುತ್ತಿರುವ ವಾಹನಗಳಿಂದ ಅಪಘಾತಗಳು ನಡೆಯುತ್ತಿವೆ.ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಿಗುವ ಹಲಗೂರು ಗ್ರಾಮ ದಿನೇ ದಿನೇ ಬೆಳವಣಿಗೆ ಕಾಣುತ್ತಿದೆ. ಮಳವಳ್ಳಿ ತಾಲೂಕಿಗೆ ಸೇರುವ ಹಲಗೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಹಲವು ಪ್ರವಾಸಿ ತಾಣಗಳು ಇರುವುದರಿಂದ ಶನಿವಾರ - ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರು ಕೂಡ ಹೊರ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಿರುವುದರಿಂದ ಇದೇ ರಸ್ತೆಯಲ್ಲಿ ಹೆಚ್ಚಾಗಿ ವಾಹನಗಳು ಸಂಚರಿಸುತ್ತವೆ. ಸಂಚಾರಿ ನಿಮಯಗಳನ್ನು ಪಾಲನೆ ಮಾಡದಿರುವ ಕಾರಣ ಅಪಘಾತಗಳು ಹೆಚ್ಚಳವಾಗುತ್ತಿವೆ.ನೂತನವಾಗಿ ಬಸಾಪುರ ಗ್ರಾಮದ ಬಳಿಯಿಂದ ಚಿಲ್ಲಾಪುರ ಗೇಟಿನವರೆಗೂ ಬೈಪಾಸ್ ಮಾಡಲಾಗಿದೆ. ಆದರೆ, ಬೈಪಾಸ್ ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ರಸ್ತೆಯಲ್ಲಿ ವಾಹನಗಳಿಗೆ ಅಧಿಕೃತವಾಗಿ ಸಂಚಾರ ಮಾಡಲು ಅನುವು ಮಾಡಿ ಕೊಡದಿದ್ದರೂ ಹಾಗೂ ಪಕ್ಕದ ರಸ್ತೆಯಲ್ಲಿ ಸಂಚರಿಸಿ ಎಂಬ ನಾಮಫಲಕ ಇದ್ದರೂ ವಾಹನಗಳು ಮಾತ್ರ ಹೆದ್ದಾರಿಯಲ್ಲಿ ಅತಿವಾಗಿ ಸಂಚರಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.ಕಳೆದ ಮೇ 21ರಂದು ಬೈಪಾಸ್ನಲ್ಲಿ ಬೈಕ್ ಮತ್ತು ಮಹೇಂದ್ರ ಬೊಲೆರೊ ನಡುವೆ ಡಿಕ್ಕಿಸಂಭವಿಸಿ ಓರ್ವ ಮತಪಟ್ಟಿದ್ದಾನೆ. ಎಚ್. ಬಸಾಪುರದ ಬಳಿ ಕಳೆದ ತಿಂಗಳು ಸ್ಕೂಟರ್ ಗೆ ವಾಹನ ಡಿಕ್ಕಿ ಹೊಡೆದು ಒಬ್ಬ ಸಾವನ್ನಪ್ಪಿದ್ದಾನೆ. ಅದೇ ರೀತಿ ಹಲವು ಅಪಘಾತಗಳು ಸಂಭವಿಸಿವೆ. ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ವರದಿಯೂ ಆಗಿದೆ.ಸ್ಪೀಟ್ ಲಿಮಿಟ್ ಹಂಪ್ಸ್ ಹಾಕುವುದು ಉತ್ತಮ:
ಹೆದ್ದಾರಿ ಕಾಮಗಾರಿ ಮುಗಿದ ನಂತರ ಬಹುತೇಕ ಎಲ್ಲಾ ವಾಹನಗಳು ಇಲ್ಲೇ ಸಂಚರಿಸುವುದರಿಂದ ಇನ್ನೂ ಹೆಚ್ಚಿನ ಅಪಘಾತಗಳು ನಡೆಯುವ ಸಂಭವವಿದೆ. ಅಪಘಾತಗಳ ತಡೆಗೆ ಮುಂಜಾಗ್ರತೆ ಕ್ರಮವಾಗಿ ಅಗತ್ಯವಿರುವ ಕಡೆ ವಾಹನಗಳಿಗೆ ಸ್ಪೀಡ್ ಕಂಟ್ರೋಲ್ ಹಾಗೂ ಸ್ವೀಡ್ ಲಿಮಿಟ್ , ಹಂಪ್ಸ್ ಹಾಕುವುದು ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರವಾಸಿತಾಣಗಳ ಮುಖ್ಯ ರಸ್ತೆ:ಪ್ರವಾಸಿ ತಾಣವಾಗಿರುವ ಹಲಗೂರಿನಿಂದ ಮುತ್ತತ್ತಿಗೆ ಹಾಗೂ ಬೆಂಕಿ ಪಾಲ್ಸ್ ಗೆ ಹೋಗಬೇಕಾದರೆ ಬೈಪಾಸ್ ರಸ್ತೆಯನ್ನು ದಾಟಿಕೊಂಡೆ ಹೋಗಬೇಕು. ಮಳವಳ್ಳಿಯ ಗಗನಚುಕ್ಕಿ ಜಲಪಾತ, ಹನೂರಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಪ್ರವಾಸಿಗರಿಗೆ ಇದೇ ರಸ್ತೆ ಮುಖ್ಯವಾಗಿದೆ.ಮುತ್ತತ್ತಿ ರಸ್ತೆಯಲ್ಲಿ ಹಲವು ಹಳ್ಳಿಗಳು ಬರುತ್ತವೆ. ಇಲ್ಲಿ ಹೆಚ್ಚು ಸಾರಿಗೆ ಬಸ್ಸಿನ ಸೌಕರ್ಯ ಇಲ್ಲದೆ ಸ್ಥಳೀಯರು ತಮ್ಮ ಅಗತ್ಯ ಕೆಲಸಗಳಿಗಾಗಿ ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಆದ್ದರಿಂದ ಕೂಡಲೇ ಅಪಘಾತಗಳ ತಡೆಗೆ ಕನಕಪುರ - ಹಲಗೂರು - ಮಳವಳ್ಳಿ ಮಾರ್ಗಗಳಲ್ಲಿ ಸಿಗುವ ಪ್ರಮುಖ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಮುಖ್ಯ ವೃತ್ತಗಳಿಗೆ ಸ್ಪೀಡ್ ಕಂಟ್ರೋಲ್ ಹಾಗೂ ಸ್ವೀಡ್ ಲಿಮಿಟ್ , ಹಂಪ್ಸ್ ಹಾಕುವುದು ಅಗತ್ಯವಾಗಿದೆ.ಪ್ರಸಿದ್ಧ ಪುಣ್ಯಕ್ಷೇತ್ರ ಬಸವನ ಬೆಟ್ಟಕ್ಕೆ ಹೋಗಬೇಕಾದರೆ ಹೆಚ್.ಬಸಾಪುರ ಬೈಪಾಸ್ ರಸ್ತೆ ದಾಟಿಕೊಂಡು ಹೋಗಬೇಕು. ಅಪಘಾತ ತಡೆಗಾಗಿ ಗ್ರಾಪಂಗೆ ಅಧಿಕಾರಿಗಳಿಗೆ ಪತ್ರ ಪಡೆದು ಸೂಚಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಚಿಲ್ಲಾಪುರ ಗೇಟ್, ಮುತ್ತತ್ತಿ ರಸ್ತೆ ಹಾಗೂ ಹೆಚ್. ಬಸಾಪುರದ ಬಳಿ ಅಪಘಾತ ತಡೆಗೆ ಕ್ರಮ ವಹಿಸುವುದು ಸೂಕ್ತ.ಸುರೇಂದ್ರ, ಗ್ರಾಪಂ ಸದಸ್ಯರು, ಹಲಗೂರು.ಬೈಪಾಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಧಿಕೃತವಾಗಿ ಅನುವು ಮಾಡಿಕೊಡದಿದ್ದರೂ ಈಗಾಗಲೇ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಹಲಗೂರು ಸಮೀಪದ ಭೀಮಾನದಿಯ ಸೇತುವೆ ಹತ್ತಿರ ಬೈಪಾಸ್ ರಸ್ತೆ ಬರುತ್ತದೆ. ಅದರೆ, ಸೇತುವೆ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಅದನ್ನು ಪೂರ್ಣಗೊಳಿಸಬೇಕು. ರಾಜೇಶ್ , ಗ್ರಾಪಂ ಸದಸ್ಯ, ಬ್ಯಾಡರಹಳ್ಳಿ.ಪ್ರವಾಸಿ ತಾಣವಾದ ಹಲಗೂರಿಗೆ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಕನಕಪುರ - ಮಳವಳ್ಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಅಗತ್ಯವಿರುವ ಕಡೆಗಳಲ್ಲಿ ಅಪಘಾತಗಳ ತಡೆಗೆ ವಾಹನಗಳ ವೇಗದ ಮಿತಿ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ಸತೀಶ್, ಯುವ ಮುಖಂಡ ಗೊಲ್ಲರಹಳ್ಳಿ.