ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಶರಣರ ವಚನಗಳನ್ನು ಫ.ಗು. ಹಳಕಟ್ಟಿಯವರು ರಕ್ಷಣೆ ಮಾಡದಿದ್ದರೆ ನಾವಿಂದು ಶರಣರ ವಚನಗಳನ್ನು ಕಾಣುತ್ತಿರಲಿಲ್ಲ ಎಂದು ಮೈಸೂರಿನ ಸಾಹಿತಿ ಶಂಕರ ದೇವನೂರ ಅಭಿಪ್ರಾಯಪಟ್ಟರು.ನಗರದ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ 650ನೇ ಮಾಸಿಕ ಶಿವಾನುಭವದಲ್ಲಿ ಫ.ಗು. ಹಳಕಟ್ಟಿಯವರ ಪ್ರತಿಷ್ಠಾನ ಏರ್ಪಡಿಸಿದ್ದ ಹಳಕಟ್ಟಿ ಪ್ರಶಸ್ತಿ ಹಾಗೂ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿ, 12ನೇ ಶತಮಾನದ್ಲಿನ ಶರಣರು ತಾಳೆಗೆರೆಯಲ್ಲಿ ಬರೆದ ಅಮೂಲ್ಯವಾದ ವಚನಗಳನ್ನು ಧಾರವಾಡ ಫ.ಗು. ಹಳಕಟ್ಟಿಯವರು ಸಂರಕ್ಷಣೆ ಮಾಡಿದ್ದು ದೊಡ್ಡ ಸಾಧನೆ. ವಚನ ರಕ್ಷಣೆಗೆ ಜೀವನ ಮುಡುಪಾಗಿಟ್ಟ ಹಳಕಟ್ಟಿಯವರು ನಾಡಿನಾದ್ಯಂತ ಸಂಚರಿಸಿ ತಾಳೆಗರಿಯಲ್ಲಿರುವ ಶರಣರ ವಚನ ಸಂಗ್ರಹ ಮಾಡಿ, ಅವುಗಳನ್ನು ಮರು ಮುದ್ರಣ ಮಾಡಿದ್ದರಿಂದ ಇಂದು ನಾಡಿನ ಮನೆ ಮನೆಯಲ್ಲಿ 12ನೇ ಶರಣರ ವಚನಗಳನ್ನು ಕಾಣುತಿದ್ದೇವೆ ಹಾಗೂ ಒದುತ್ತಿದ್ದೇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿ, ಶರಣರಾದ ಫ.ಗು. ಹಳಕಟ್ಟಿ ಅವರು ಮಾಡಿದ ಈ ಕಾರ್ಯ ಅತಿ ದೊಡ್ಡದು ಅವರಿಂದಲೇ ಇಂದು ನಾವು ಶರಣರ ವಚನಗಳನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.ಸಾಹಿತಿ ಶಂಕರ ದೇವನೂರ ದಂಪತಿಗೆ ಶ್ರೀಮಠದ ಪರವಾಗಿ ಗೌರವಿಸಿ ಸತ್ಕರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ದಂಪತಿ, ಶಾಮಿಯಾನ ಡೇಕೋರೇಶನ್ ಸಂಘದ ರಾಜ್ಯಾಧ್ಯಕ್ಷ ಮುನ್ನಾ ಅತ್ತಾರ, ಉಪಾಧ್ಯಕ್ಷ ಮೃತ್ಯುಂಜಯ ಕರನಂದಿ, ಸಂಘಟನಾ ಕಾರ್ಯದರ್ಶಿ ಬಾಲಗುರುನಾಥಂ ಹಾಗೂ ದಾಸೋಹ ಸೇವೆ ಮಾಡಿದ ಎಸ್.ಎಸ್. ಆವಟೆ ಅವರನ್ನು ಶ್ರೀಮಠದ ಪರವಾಗಿ ಗೌರವಿಸಿ ಸತ್ಕರಿಸಲಾಯಿತು.