ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಚನ ಸಾಹಿತ್ಯದ ಸಂಶೋಧನೆಗೆ ಡಾ.ಫ.ಗು.ಹಳಕಟ್ಟಿ ಜೀವನವನ್ನೇ ಮುಡುಪಾಗಿಟ್ಟರು. ಲಾಭ ತರುವ ವಕೀಲಿ ವೃತ್ತಿಯನ್ನು ಬಿಟ್ಟು, ಸತತ 60 ವರ್ಷಗಳ ಕಾಲ ವಚನ ಸಂಶೋಧನೆ ಹಾಗೂ ಪ್ರಕಟಣೆ ಕಾರ್ಯಕೈಗೊಂಡು 250ಕ್ಕೂ ಅಧಿಕ ವಚನಕಾರರನ್ನು ನಾಡಿಗೆ ಪರಿಚಯಿಸಿಕೊಟ್ಟರು ಎಂದು ಪ್ರಾಂಶುಪಾಲೆ ಡಾ.ಎನ್.ಮಮತಾ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಡಾ.ಫ.ಗು.ಹಳಕಟ್ಟಿ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಲು ಕಾರಣೀಭೂತರಾದ ಡಾ. ಫ.ಗು.ಹಳಹಟ್ಟಿಯವರನ್ನು ಸಾಹಿತಿ ಸಿಂಪಗೆ ಲಿಂಗಣ್ಣ ಕರ್ನಾಟಕದ ಮ್ಯಾಕ್ಸ್ಮುಲ್ಲರ್ ಎಂದು ಕರೆದಿದ್ದಾರೆ. ಸಾಹಿತಿ ಬಿ.ಎಂ.ಶ್ರೀಕಂಠಯ್ಯನವರು ವಚನಗುಮ್ಮಟ ಎಂದು ಹೊಗಳಿದ್ದಾರೆ. ಉತ್ತರ ಕರ್ನಾಟಕದ ಮನೆಗಳಲ್ಲಿ ದೇವರ ಜಗಲಿಯಲ್ಲಿ ಪೂಜೆಗೆ ಇರಿಸಿದ್ದ ವಚನ ಸಾಹಿತ್ಯದ ತಾಳೆಗರಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅಧ್ಯಯನ ಮಾಡಿ ವಚನಗಳನ್ನು ಪ್ರಕಟಿಸಿ, ವಚನಕಾರರ ಚಿಂತನೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಡಾ.ಫ.ಗು.ಹಳಕಟ್ಟಿ ಅವರು ಎಂದಿಗೂ ಹಣ ಹಾಗೂ ಸಂಪತ್ತಿಗಾಗಿ ವಚನಗಳ ಸಂಶೋಧನೆ ಕೈಗೊಳ್ಳಲಿಲ್ಲ. ಅವರ ಮಗ ಅಪಘಾತಕ್ಕೆ ತುತ್ತಾಗಿ ಮರಣ ಹೊಂದಿದರೂ, ಧೃತಿಗೆಡದೆ ವಚನ ಸಂಶೋಧನೆಯನ್ನು ಮುಂದುವರಿಸಿದರು. ಇವರ ವ್ಯಕ್ತಿತ್ವ ನಾಡಿಗೆ ಮಾದರಿಯಾಗಿದೆ. ಡಾ.ಫ.ಗು.ಹಳಕಟ್ಟಿ ಜೀವಿತ ಕಾಲದಲ್ಲಿ ಅವರ ಕಾರ್ಯವನ್ನು ಜನರು ಹೆಚ್ಚಾಗಿ ಗುರುತಿಸಲಿಲ್ಲ. ಆದರೆ ವಿಜಯಪುರದಲ್ಲಿ ವಾಸವಿದ್ದ ಡಾ.ಫ.ಗು.ಹಳಕಟ್ಟಿಯವರ ಮನೆಗೆ ಅಂದಿನ ರಾಜ್ಯಪಾಲದ ಜಯಚಾಮರಾಜೇಂದ್ರ ಒಡೆಯರ್ ಭೇಟಿ ನೀಡಿ ಗೌರವಿಸಿದರು. ಮಠಗಳು ಡಾ.ಫ.ಗು.ಹಳಕಟ್ಟಿಯವರನ್ನು ಸ್ಮರಿಸುವ ಕೆಲಸ ಮಾಡಬೇಕು. ಇಂದಿನ ಪೀಳಿಗೆಗೆ ಅವರ ಕೊಡುಗೆ ಮತ್ತು ವ್ಯಕ್ತಿತ್ವದ ಪರಿಚಯ ಮಾಡಿಕೊಡಬೇಕು ಎಂದು ಡಾ.ಎನ್.ಮಮತಾ ಹೇಳಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿಯವರ ಸಾಹಿತ್ಯ ಸೇವೆ ಅವಿಸ್ಮರಣೀಯ. ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿ ಅವರಿಂದ ಸಾಧ್ಯವಾಗಿದೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ .ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್ಪೀರ್,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಷಣ್ಮುಖಪ್ಪ, ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್,ಸಾಹಿತಿ ಆನಂದ ಮೂರ್ತಿ ಇದ್ದರು. ಶಿಕ್ಷಕಿ ಗೀತಾ ಭರಮಸಾಗರ ನಿರೂಪಿಸಿದರು.