ಕನಕಗಿರಿ: ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಬಂದ್ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಚಂದ್ರಕಾಂತ ಕಾಂದ್ರೊಳ್ಳಿ) ಬಣದ ಕಾರ್ಯಕರ್ತರು ಸೋಮವಾರ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ನಿಂಗಪ್ಪ ಬೆಣಕಲ್ ಮಾತನಾಡಿ, ಕನಕಗಿರಿ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಟ್ಕಾ, ಅಕ್ರಮ ಮದ್ಯ ಮಾರಾಟ, ಮರಳು ದಂಧೆ, ಇಸ್ಪೀಟ್, ಜೂಜಾಟಗಳಂತಹ ಕಾನೂನುಬಾಹಿರ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಅಕ್ರಮ ತಡೆಗೆ ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಅಕ್ರಮ ಚಟುವಟಿಕೆಯಿಂದಾಗಿ ಯುವ ಜನರ ಮೇಲೆ ದುಷ್ಪರಿಣಾಮ ಬೀರಿದ್ದು, ಸಮಾಜದಲ್ಲಿ ಅಶಾಂತಿ ಉಟಾಗುತ್ತಿದೆ. ತಾಲೂಕಿನ ಕರಡೋಣ, ನವಲಿ, ಬುನ್ನಟ್ಟಿ, ಯತ್ನಟ್ಟಿ, ಕೆ. ಮಲ್ಲಾಪುರ, ಈಚನಾಳ, ಗುಡದೂರು ಸೇರಿ ನಾನಾ ಗ್ರಾಮಗಳಲ್ಲಿ ಅಕ್ರಮ ಮರುಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುವ ಜತೆಗೆ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಅರೆಬೆತ್ತಲೆ ಪ್ರತಿಭಟನೆ: ಅಕ್ರಮ ಚಟುವಟಿಕೆ ವಿರುದ್ಧ ಪ್ರತಿಭಟಿಸಿ, ಮನವಿ ಸಲ್ಲಿಸಲು ಬಂದಿದ್ದ ಸಂಘಟನೆಯ ಕಾರ್ಯಕರ್ತರು ಅರೆಬೆತ್ತಲೆ ಹೋರಾಟ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಕಾರ್ಯಕರ್ತರು ಇಚ್ಛಿಸಿದ್ದರು. ಆದರೆ, ತಹಸೀಲ್ದಾರರು ಮನವಿ ಸ್ವೀಕರಿಸಲು ಬರಲು ತಡವಾಗಿದ್ದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಗಂಗಾವತಿ, ಲಿಂಗಸೂಗುರು, ಕಾರಟಗಿ, ಕೊಪ್ಪಳಕ್ಕೆ ಹೋಗುವ ರಸ್ತೆಗಳು ಕೆಲಹೊತ್ತು ಬಂದ್ ಆಗಿದ್ದವು. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಬಳಿಕ ಪಿಐ ವಿ. ನಾರಾಯಣ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ನೂತನ ತಹಸೀಲ್ದಾರ ಚಂದ್ರಶೇಖರ ಗಾಳಿ ಮನವಿ ಸ್ವೀಕರಿಸಿದರು.ಈ ವೇಳೆ ಗಾಳೆಪ್ಪ ಮಕ್ಕಳ್ಳಿ, ಶಶಿಕಲಾ ಮಠದ, ಕರಿಯಪ್ಪ ಮಣ್ಣಿನವರ, ಕನಕಪ್ಪ ಮ್ಯಾಗಡೆ, ಮಂಜುನಾಥ ಬಡಿಗೇರ, ಮೈಲಪ್ಪ ಮಾದಿನೂರು, ಸಂಜೀವಮೂರ್ತಿ ಬೇವಿನಗಿಡ, ಹುಲುಗಪ್ಪ ಪೂಜಾರ, ಶ್ರೀಕಾಂತ ಹೊಸ್ಮನಿ, ಯಮನೂರ ಬಣಕಾರ, ಶಿವಗಂಗಮ್ಮ ಕವಲೂರು, ದುರುಗಮ್ಮ ಬೆಟಗೇರಿ, ಮರಿಯಮ್ಮ ಗುಮಗೇರಿ ಇದ್ದರು.