ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರನ್ನು ಶನಿ ಎಂದು ಟೀಕಿಸಿರುವ ಮಾಜಿ ಶಾಸಕ ಸುನೀಲ ಹೆಗಡೆ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
ಹಳಿಯಾಳ: ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರನ್ನು ಶನಿ ಎಂದು ಟೀಕಿಸಿರುವ ಮಾಜಿ ಶಾಸಕ ಸುನೀಲ ಹೆಗಡೆ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ ದೇಶಪಾಂಡೆ ಅವರನ್ನು ಮತ್ತೆ ಗೆಲ್ಲಿಸಿ, ಹಳಿಯಾಳ ಕ್ಷೇತ್ರದ ಅಭಿವೃದ್ಧಿ ಹಾಗೂ ಸೇವೆ ಮಾಡಲು ಅಣಿಗೊಳಿಸಲಿದ್ದೇವೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಘೋಷಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು ಮಾತನಾಡಿ, ಮಾಜಿ ಶಾಸಕ ಸುನೀಲ ಹೆಗಡೆ ಹೇಳಿಕೆ ಖಂಡಿಸಿ, ಸುನೀಲ ಹೆಗಡೆ ಅವರು ರಾಜಕೀಯವಾಗಿ ಬೆಳೆದಿದ್ದು, ಸ್ಥಾನಮಾನ ಪಡೆದಿದ್ದು, ದೇಶಪಾಂಡೆ ಅವರ ಕೃಪಾಕಟಾಕ್ಷದಿಂದ ಎಂಬುದನ್ನು ಮರೆತಿದ್ದಾರೆ ಎಂದರು.ಪಕ್ಷದ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ಸುನೀಲ ಹೆಗಡೆ ಅವರ ನಡೆ ಹಾಗೂ ನುಡಿ ಎರಡೂ ಸರಿಯಾಗಿಲ್ಲ. ಅದಕ್ಕಾಗಿಯೇ ಈಗ ಅವರು ಪಕ್ಷದಲ್ಲಿ ಒಬ್ಬಂಟಿಗರಾಗಿದ್ದಾರೆ, ಆದುದರಿಂದ ವಿಚಲಿತರಾಗಿರುವ ಅವರು ತಮ್ಮ ಅಸ್ತಿತ್ವ ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ದೇಶಪಾಂಡೆ ಅಭಿವೃದ್ಧಿ ಮಾಡದಿದ್ದರೆ ಒಂಬತ್ತು ಬಾರಿ ಆಯ್ಕೆಯಾಗಿ ಬರುತ್ತಿದ್ದರೇ ಎಂದು ಪ್ರಶ್ನಿಸಿದರು. ಕಾಳಿನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಯೋಜನೆಗಳು ಅಂತಿಮ ಹಂತಕ್ಕೆ ತಲುಪಿರುವುದು ಗೊತ್ತಾಗಿ ಈಗ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುವುದು, ಗೊಂದಲ ಸೃಷ್ಟಿಸುವ ಕುತಂತ್ರ ಆರಂಭಿಸಿದ್ದಾರೆ ಎಂದರು.ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ ಮಾತನಾಡಿ, ಸುನೀಲ ಹೆಗಡೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ್ ಸಾಳುಂಕೆ, ರವಿ ತೋರಣಗಟ್ಟಿ, ರವಿ ವಡ್ಡರ ಮಾತನಾಡಿದರು. ಪ್ರಮುಖರಾದ ಸತ್ಯಜಿತ ಗಿರಿ, ಮಾರುತಿ ಕಲಬಾವಿ, ಸುವರ್ಣ ಮಾದರ, ಬಿ.ಡಿ. ಚೌಗಲೆ, ಅಶೋಕ ಮೇಟಿ, ಮಾಲಾ ಬೃಗಾಂಜಾ, ಫಯಾಜ್ ಶೇಖ್ ಇದ್ದರು.