ಬಿ.ರಾಮಪ್ರಸಾದ್ ಗಾಂಧಿ
ಹಂಪಿ: ಹಣ್ಣು ಮತ್ತು ತರಕಾರಿಗಳಿಂದ ಕೆತ್ತಿರುವ ಮೊಸಳೆ, ನವಿಲು, ಕೈ ಮುಗಿದಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಭಾವಚಿತ್ರ, ವಿಜಯನಗರ ಸಾಮ್ರಾಜ್ಯದ ಲಾಂಛನ, ರಾಜಬೀದಿಯಲ್ಲಿನ ವಜ್ರ, ವೈಢೂರ್ಯ ವ್ಯಾಪಾರ, ಜಿಲ್ಲೆಯ ಬೆಳೆಯ ವೈವಿಧ್ಯತೆ...ಇವು ಹಂಪಿ ಉತ್ಸವದ ಅಂಗವಾಗಿ ಇಲ್ಲಿಯ ಮಾತಂಗ ಪರ್ವತದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ಮನಮೋಹಕ ದೃಶ್ಯ. ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ಅಲಂಕಾರದಿಂದ ಕೂಡಿದ ಸಾಸಿವೆಕಾಳು ಗಣಪ, ಬೆಳ್ಳಿ ಬಂಗಾರ ಮಾರುವ ರಾಜಬೀದಿ ಹಂಪಿ ಬಜಾರ, ಕೃಷ್ಣದೇವರಾಜ ಅರಸರ ಪುತ್ಥಳಿ, ರಂಗೋಲಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಭಾವಚಿತ್ರ ಜನರಿಗೆ ಆಕರ್ಷಿತವಾದರೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಬೇಲದಹಣ್ಣು, ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡದ ಹಿಮಾಲಯನ್ ಸ್ಟ್ರಾಬೆರಿ, ಯರಬಾಳು ಗ್ರಾಮದ ಗುರುಸಿದ್ದಪ್ಪರ ಬೆಟ್ಟದ ನೆಲ್ಲಿ ಕ್ಯಾಂಡಿ, ಬಾಳೆ, ಈರುಳ್ಳಿ, ಪೇರಲ ಹೀಗೆ ವಿಜಯನಗರ ಜಿಲ್ಲೆಯಲ್ಲಿ ಬೆಳೆಯುವ ಬೆಳೆಯ ವೈವಿಧ್ಯತೆ ಪ್ರದರ್ಶನ ಮನಮೋಹಕವಾಗಿದ್ದವು.
ಭಾನುವಾರ ಇರುವ ಮಹಾಶಿವರಾತ್ರಿ ಅಂಗವಾಗಿ ಶಿವನ ಬೃಹತ್ ಪ್ರತಿಮೆ ಜನರನ್ನು ಆಕರ್ಷಿಸುತ್ತಿತ್ತು. ಒಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಫಲಪುಷ್ಪ ಪ್ರದರ್ಶನ ಹಂಪಿ ಉತ್ಸವಕ್ಕೆ ಆಗಮಿಸಿದವರಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.1 ಲಕ್ಷಕ್ಕೂ ಹೆಚ್ಚು ಸೇವಂತಿಗೆ, ಗುಲಾಬಿ, ಬಳಕು, ಜಬೇರ, ಆರ್ಕಿಡ್ಸ್, ಬ್ಲಾಡಿಯಲೋಸ್, ಆ್ಯಂಪೋರಿಯಂ ಮುಂತಾದ ಹೂವುಗಳಿಂದ ಫಲಪುಷ್ಪ ಪ್ರದರ್ಶನ ಹಾಗೂ ವಿಜಯ ನಗರ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಬೆಳಗಳ ವೈವಿಧ್ಯತೆ ಪ್ರದರ್ಶನ ಈ ಬಾರಿಯ ವಿಶೇಷವಾಗಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಎಚ್.ಎಸ್. ಪ್ರಭುರಾಜ.