ಮಂಜುನಾಥ ಕೆ.ಎಂ.

ಹಂಪಿ: ಎರಡನೇ ದಿನವೂ ಕುಗ್ಗದ ಜನರ ಉತ್ಸಾಹ, ವ್ಯಾಪಾರ ಮಳಿಗೆಗಳಲ್ಲಿ ಭಾರೀ ಜನಸ್ತೋಮ, ವ್ಯಾಪಾರವಾಗುತ್ತಿಲ್ಲ ಎಂದು ಗೋಳಾಡಿದ ಮಾರಾಟಗಾರರು, ಸಂಜೆಯಾಗುತ್ತಿದ್ದಂತೆಯೇ ಹಂಪಿಯತ್ತ ಸಾಗಿ ಬಂದ ಜನಸಾಗರ, ವಿಚಾರ ಸಂಕಿರಣ, ಕವಿಗೋಷ್ಠಿಗಳಲ್ಲಿ ಪ್ರೇಕ್ಷಕರ ಕೊರತೆ ನೀಗಿಸಿದ ಅಂಗನವಾಡಿ ಕಾರ್ಯಕರ್ತೆಯರು, ಕುಡಿಯುವ ನೀರಿಗಾಗಿ ಮುಂದುವರಿದ ಜನರ ಪರದಾಟ...ಹಂಪಿ ಉತ್ಸವದ ಎರಡನೇ ದಿನವಾದ ಶನಿವಾರ ಇಡೀ ದಿನದಲ್ಲಿ ಕಂಡು ಬಂದ ದೃಶ್ಯಗಳಿವು.ನಿರೀಕ್ಷೆಯಂತೆ ಉತ್ಸವದ ಮಳಿಗೆಗಳಲ್ಲಿ ಬೆಳಗ್ಗೆ ಜನ ಸಂದಣಿ ಕಡಿಮೆಯಿತ್ತು. ಮಧ್ಯಾಹ್ನ ೧೨ ಗಂಟೆ ಬಳಿಕ ಜನೋತ್ಸಾಹ ಇಮ್ಮಡಿಯಾಯಿತು. ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಉಚಿತ ಬಸ್‌ಗಳಲ್ಲಿ ಸಾವಿರಾರು ಜನರು ಹಂಪಿಗೆ ಬಂದಿಳಿದರು. ಬೆಳಗ್ಗೆಯೇ ಹಂಪಿಗೆ ಬಂದವರು ದೇವಾಲಯಗಳು, ಸ್ಮಾರಕಗಳು, ಏಕಶಿಲೆಯ ಶಿಲ್ಪಗಳನ್ನು ಕಣ್ತುಂಬಿಕೊಂಡರು. ಸಂಜೆಯಾಗುತ್ತಿದ್ದಂತೆಯೇ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗುವ ವೇದಿಕೆಗಳತ್ತ ಹೆಜ್ಜೆ ಹಾಕಿದರು.

ಫೋನ್‌ ಪೇ ವರ್ಕ್‌ ಆಗ್ತಾ ಇಲ್ಲ: ವ್ಯಾಪಾರ ಮಳಿಗೆಗಳಲ್ಲಿ ಭಾರೀ ಜನಸ್ತೋಮವಿತ್ತು. ಸಂಜೆಯಾಗುತ್ತಿದ್ದಂತೆಯೇ ನಿಲ್ಲಲು ಜಾಗವಿಲ್ಲದಷ್ಟು ಜನಾಗಮನವಾಯಿತು. ಆದರೆ, ನಿರೀಕ್ಷೆಯಷ್ಟು ವ್ಯಾಪಾರವಾಗುತ್ತಿಲ್ಲ ಎಂದು ಮಾರಾಟಗಾರರು ಗೊಣಗಿದರು. ಪ್ರತಿಯೊಬ್ಬರೂ ಫೋನ್‌ ಪೇ ಬಳಸುತ್ತಾರೆ. ಕ್ಯಾಶ್‌ ಇಲ್ಲ ಅಂತಾರೆ. ಇಲ್ಲಿ ಸಿಗ್ನಲ್‌ ಸಿಗುತ್ತಿಲ್ಲ. ಫೋನ್‌ಪೇ ಕೆಲಸ ಮಾಡುತ್ತಿಲ್ಲ. ನಾವು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಬಂದಿದ್ದೆವು ಎಂದು ವಿಜಯಪುರದಿಂದ ಆಗಮಿಸಿದ್ದ ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಉಳಿದ ವ್ಯಾಪಾರಿಗಳದ್ದೂ ಇದೇ ಗೊಣಗಾಟವಾಗಿತ್ತು. ಒಟ್ಟು ೯೦ ಮಳಿಗೆಗಳನ್ನು ನಿರ್ಮಿಸಲಾಗಿತ್ತು.

ಈ ಬಾರಿಯೂ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗೆ ಜಿಲ್ಲಾಡಳಿತವೇ ಕೊಕ್ಕೆ ಹಾಕಿದಂತೆ ಕಂಡು ಬಂತು. ಪುಸ್ತಕ ಮಳಿಗೆಯೊಂದಕ್ಕೆ ₹೪ರಿಂದ ₹೫ ಸಾವಿರ ಬಾಡಿಗೆ ನಿಗದಿ ಮಾಡಿದ್ದಾರೆ. ಹೀಗಾಗಿಯೇ ಪ್ರಕಾಶಕರು ಹಂಪಿ ಉತ್ಸವಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾಡಳಿತ ಪ್ರತಿಯೊಂದನ್ನು ವ್ಯಾಪಾರ ದೃಷ್ಟಿಯಿಂದ ನೋಡುತ್ತಿರುವುದರಿಂದಲೇ ಪುಸ್ತಕಪ್ರಿಯರಿಗೆ ನಿರಾಸೆಯಾಗಿದೆ ಎಂದು ರಾಯಚೂರಿನ ಯುವ ಲೇಖಕ ಜಿ.ಆರ್. ಅಶೋಕ್‌ ಆರೋಪಿಸಿದರು. ಇಡೀ ಉತ್ಸವದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕ ಮಳಿಗೆ ಸೇರಿದಂತೆ ಮೂರೇ ಮೂರು ಪುಸ್ತಕ ಮಳಿಗೆಗಳಿದ್ದವು. ಈ ಹಿಂದೆ ಪುಸ್ತಕ ಮಳಿಗೆಗಳ ಜವಾಬ್ದಾರಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿತ್ತು. ಇದೀಗ ನೇರವಾಗಿ ಜಿಲ್ಲಾಡಳಿತವೇ ನಿಭಾಯಿಸುತ್ತಿರುವುದರಿಂದ ಈ ರೀತಿಯ ಯಡವಟ್ಟುಗಳಾಗುತ್ತಿವೆ ಎಂದು ಪುಸ್ತಕಪ್ರಿಯರು ಬೇಸರ ವ್ಯಕ್ತಪಡಿಸಿದರು.ಉತ್ಸವದಲ್ಲಿ ವಿದೇಶಿಯರ ಸಂಭ್ರಮ:

ಹಂಪಿ ಉತ್ಸವದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಸ್ಥಳೀಯರಂತೆಯೇ ವಿದೇಶಿಯರು ಆಸ್ವಾದಿಸಿದರು. ಮುಖ್ಯ ವೇದಿಕೆ ಸೇರಿದಂತೆ ಹಂಪಿಯ ವಿವಿಧೆಡೆ ಜರುಗುವ ಸಾಂಸ್ಕೃತಿಕ ಹಾಗೂ ಸಾಹಸ ಕ್ರೀಡೆಗಳನ್ನು ವಿದೇಶಿಯರು ವೀಕ್ಷಿಸಿ, ಸಂಭ್ರಮಿಸಿದರು. ಕೆಲವು ವಿದೇಶಿ ಯೂಟ್ಯೂಬರ್‌ಗಳು ಹಂಪಿ ಉತ್ಸವದ ಸಾಂಸ್ಕೃತಿಕ, ಕ್ರೀಡೆ, ರಂಗೋಲಿ, ಫಲಪುಷ್ಪ ಪ್ರದರ್ಶನ, ಡ್ರೋನ್‌ ಪ್ರದರ್ಶನಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯಗಳು ಕಂಡು ಬಂದವು.ವಾಹನ ಓಡಾಟ ಹೆಚ್ಚಳದಿಂದಾಗಿ ಹಂಪಿಯ ಮುಖ್ಯ ರಸ್ತೆಗಳಲ್ಲಿ ಧೂಳಿನಿಂದ ಕೂಡಿದ್ದವು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಜಾಗಗಳಲ್ಲಿ ಧೂಳು ನಿಯಂತ್ರಿಸಲು ನೀರು ಸಿಂಪರಣೆ ಮಾಡಲಾಯಿತು. ಆಗಸದಿಂದ ಹಂಪಿ ನೋಡಲು ಯುವಕ, ಯುವತಿಯರ ಗುಂಪು ಉತ್ಸಾಹದಿಂದ ಆಗಮಿಸಿದ್ದರು. ಉತ್ಸದ ಎರಡನೇ ದಿನವೂ ಹಂಪಿ ಬೈ ಸ್ಕೈಗೆ ಹೆಚ್ಚಿನ ಬೇಡಿಕೆಯಿತ್ತು.


ಅಂಗನವಾಡಿ ಕಾರ್ಯಕರ್ತರೇ ಪ್ರೇಕ್ಷಕರು:ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದ ವೇದಿಕೆಯಲ್ಲಿ ನಿತ್ಯ ಜರುಗುತ್ತಿರುವ ವಿಚಾರ ಸಂಕಿರಣ ಹಾಗೂ ಗೋಷ್ಠಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರೇಕ್ಷಕರ ಕೊರತೆ ನೀಗಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಭಾಗವಹಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರಿಂದ ಕಾರ್ಯಕರ್ತೆಯರು ಇಷ್ಟವಿಲ್ಲದಿದ್ದರೂ ಗೋಷ್ಠಿಗಳಲ್ಲಿ ಕುಳಿತು ಸಮಯ ಕಳೆದರು. ಇಲ್ಲಿ ಏನು ನಡೆಯುತ್ತದೆ ಎಂದು ನಮಗೇನೂ ಗೊತ್ತಿಲ್ಲ. ನಿತ್ಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿನ ವೇದಿಕೆಗೆ ಬಂದು ಕೂಡಬೇಕು. ಕಾರ್ಯಕ್ರಮ ಮುಗಿಯುವವರೆಗೆ ಇರಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರಿಂದ ಬಂದಿದ್ದೇವೆ. ಪಾಳಿಯಂತೆ ಬೇರೆ ಬೇರೆ ಕೇಂದ್ರಗಳ ಕಾರ್ಯಕರ್ತೆಯರು ನಿತ್ಯ ಬರುತ್ತಿದ್ದಾರೆ ಎಂದು ತಿಳಿಸಿದರು.

ಕಲ್ಲುಗುಂಡು ಎತ್ತಿದ್ದು ಆರೇ ಜನ:ಮಲಪನಗುಡಿಯ ಗಾಳೆಮ್ಮ ದೇವಸ್ಥಾನ ಹಿಂಭಾಗ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾ ಸ್ಪಧೆಯಲ್ಲಿ ಜರುಗಿದ ಭಾರ ಎತ್ತುವ ಹಾಗೂ ಕುಸ್ತಿ ಪಂದ್ಯಾವಳಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ತೀರಾ ನೀರಸವಾಗಿತ್ತು. ಕಲ್ಲುಗುಂಡು ಎತ್ತುವ ಸ್ಪರ್ಧೆಯಲ್ಲಿ ಬರೀ ೬ ಜಟ್ಟಿಗಳು ಮಾತ್ರ ಭಾಗವಹಿಸಿದ್ದರು. ಇನ್ನು ಕುಸ್ತಿ ಪಂದ್ಯಾವಳಿ ರೋಚಕವಾಗಿತ್ತಾದರೂ ಕುಸ್ತಿಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸಲು ಜನರೇ ಇರಲಿಲ್ಲ. ೭೫ ಕುಸ್ತಿಪಟುಗಳು ಭಾಗವಹಿಸಿದ್ದರು. ಬಂಡಿಗಾಲಿ ಬಿಚ್ಚಿ ಜೋಡಿಸುವ ದೃಶ್ಯ ಗಮನ ಸೆಳೆಯಿತು. ಉತ್ಸವದಲ್ಲಿ ಮುಖ್ಯವೇದಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನಸ್ತೋಮ ಕಂಡು ಬಂತಾದರೂ ಉಳಿದ ವೇದಿಕೆಗಳಲ್ಲಿ ಪ್ರೇಕ್ಷಕರ ಕೊರತೆ ಕಾಡಿತು. ಉತ್ಸವದಲ್ಲಿ ೬ ವೇದಿಕೆಗಳನ್ನು ನಿರ್ಮಿಸಲಾಗಿದ್ದು ಎಂ.ಪಿ. ಪ್ರಕಾಶ್‌ ಅವರ ಹೆಸರಿನ ಮುಖ್ಯವೇದಿಕೆಯಲ್ಲಿ ಜರುಗುವ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಚಿತ್ರನಟ, ನಟಿಯರು ಭಾಗವಹಿಸುತ್ತಿರುವುದರಿಂದ ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯವೇದಿಕೆಯತ್ತ ಧಾವಿಸಿದರು.

ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಜರುಗಿದ ಕವಿಗೋಷ್ಠಿ ನೀರಸವಾಗಿತ್ತು. ನಾಲ್ಕೈದು ಕವಿಗಳು ಹೊರತುಪಡಿಸಿದರೆ ಉಳಿದವರ ಕಾವ್ಯಗಳು ಕೇಳುಗರ ಬಾಧಿಸಿದವು. ಕೆಲವರು ಕವಿತೆ ವಾಚಿಸುವ ಬದಲು ಹಾಡಿ ಹಾಡಿದರು. ಮತ್ತೆ ಕೆಲವರು ಪದಗಳನ್ನು ಪ್ರಾಸಬದ್ಧಗೊಳಿಸಲು ಹೆಣಗಾಡಿದರು.ಪೂನಾದಿಂದ ಆಗಮಿಸಿದ್ದ ಕವಯತ್ರಿ ಗೀತಾ ಎ.ಎಸ್. ಕಮಲಾಪುರ ವಾಚಿಸಿದ ಕವಿತೆ ಹೆಚ್ಚು ಗಮನ ಸೆಳೆಯಿತು.

ಹೊತ್ತು ಮುಳುಗುವ ಮುನ್ನವೇ ಕಾರ್ಯಕ್ರಮ ಶುರು:ಹಂಪಿ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ಪ್ರತಿಯೊಬ್ಬರ ಕಲಾವಿದರ ಕನಸು. ಒಮ್ಮೆ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದೇ ಎಂದು ಹೇಳಿಕೊಳ್ಳುವುದೇ ಕಲಾವಿದರಿಗೆ ಹೆಮ್ಮೆ. ಹೀಗಾಗಿ ಪ್ರತಿವರ್ಷವೂ ಕಲಾವಿದರು ಉತ್ಸವದಲ್ಲಿ ಭಾಗವಹಿಸಲು ಹವಣಿಸುತ್ತಾರೆ. ಅವಕಾಶ ಸಿಗದೇ ಹೋದರೆ ಪ್ರಭಾವಿಗಳ ಶಿಫಾರಸು ಪಡೆದು ಕಾರ್ಯಕ್ರಮ ಗಿಟ್ಟಿಸಿಕೊಳ್ಳುತ್ತಾರೆ. ಎಂದಿನಂತೆ ಈ ವರ್ಷವೂ ನೂರಾರು ಸಂಖ್ಯೆಯಲ್ಲಿ ಕಲಾವಿದರು ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಕಲಾವಿದರಿಗೂ ವೇದಿಕೆ ಸಮಯ ಒದಗಿಸಿಕೊಡಲು ಹೊತ್ತು ಮುಳುಗುವ ಮುನ್ನವೇ ಕಾರ್ಯಕ್ರಮ ಆರಂಭಿಸಲಾಗುತ್ತಿದ್ದು, ಪ್ರೇಕ್ಷಕರು ಇರಲಿ, ಬಿಡಲಿ ಕಲಾವಿದರು ಕಲಾ ಪ್ರದರ್ಶನ ನೀಡುತ್ತಿರುವುದು ಕಂಡು ಬಂತು.

ಹಂಪಿಯಲ್ಲಿ ಶನಿವಾರ ಕಂಡು ಬಂದದ್ದು:* ಹಂಪಿ ಉತ್ಸವಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು ಹೊತ್ತು ಕಳೆಯಲು ಮೊಬೈಲ್‌ನಲ್ಲಿ ನಿರತರಾಗಿದ್ದರು.

* ಹಾವೇರಿ ಕಾಂಗ್ರೆಸ್‌ ಸಮ್ಮೇಳನ ಹಿನ್ನೆಲೆಯಲ್ಲಿ ಬಸ್‌ಗಳ ಕೊರತೆ ಕಂಡು ಬಂತು. ಹೀಗಾಗಿ ಮಿನಿ ಟ್ರಕ್‌ನಲ್ಲಿ ಪ್ರೇಕ್ಷಕರನ್ನು ಕರೆತರಲಾಯಿತು.* ಹಂಪಿಯ ದೇವಸ್ಥಾನಗಳು ಹಾಗೂ ಸ್ಮಾರಕಗಳ ಬಳಿ ಬೆಳಗ್ಗೆಯಿಂದಲೇ ಜನ ಜಂಗುಳಿ ಇತ್ತು.

* ವಾಹನಗಳ ಓಡಾಟದಿಂದ ಧೂಳೆದ್ದ ರಸ್ತೆಗಳಿಗೆ ನೀರು ಸಿಂಪರಣೆ ಮಾಡಲಾಯಿತು.* ಬೀದಿಬದಿಯ ಹೋಟೆಲ್‌ಗಳಿಗೆ ಭರ್ಜರಿ ವ್ಯಾಪಾರವಾಯಿತು.

* ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಶನಿವಾರ ಹಂಪಿಯ ವಿವಿಧ ಸ್ಮಾರಕಗಳ ಬಳಿ ಪ್ರೇಮಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವುದು ಕಂಡು ಬಂತು.* ಗಾಳಿಪಟ ಹಾರಾಟ ಸ್ಪರ್ಧೆ ನೀರಸವಾಗಿತ್ತು. ಬೆಳಗ್ಗೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಸ್ಪರ್ಧೆ ಮಧ್ಯಾಹ್ನ ೧ ಗಂಟೆಯಾದರೂ ಶುರುವಾಗಿರಲಿಲ್ಲ.