ಸಿ.ಕೆ. ನಾಗರಾಜ
ಹಂಪಿ: ವಿಜಯನಗರ ಸಾಮ್ರಾಜ್ಯದ ಗತವೈಭವದ ಪುನರ್ ದರ್ಶನದ ಉದ್ದೇಶದಿಂದ ಹಂಪಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಹಂಪಿಯ ಆನೆಲಾಯದ ಬಳಿ ಹಕ್ಕ-ಬುಕ್ಕ ವೇದಿಕೆಯಲ್ಲಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಪ್ರಸಾರ ಮಂತ್ರಾಲಯ, ಸಂಗೀತ ಮತ್ತು ನಾಟಕ ವಿಭಾಗ ಹಾಗೂ ಜಿಲ್ಲಾಡಳಿತ, ಹಂಪಿ ಉತ್ಸವದ ಸಮಿತಿ ಸಹಯೋಗದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತಿದೆ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಂಪಿಯ ನೈಜ ಸ್ಮಾರಕಗಳನ್ನು ಬಳಸಿಕೊಂಡು ನೀಡುತ್ತಿರುವ ಪ್ರದರ್ಶನ ಜನಮೆಚ್ಚುಗೆ ಗಳಿಸುತ್ತಿದೆ.ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಆಕರ್ಷಕವಾದ ನೃತ್ಯ, ರೋಮಾಂಚನಕಾರಿ ಯುದ್ಧ ಸನ್ನಿವೇಶಗಳು, ಇಂಪಾದ ಸಂಗೀತ, ಬಗೆ ಬಗೆಯ ಬಣ್ಣದ ಉಡುಗೆ ತೊಡುಗೆ, ಉತ್ತಮ ಸಾಹಿತ್ಯ, ಸನ್ನಿವೇಶಕ್ಕೆ ತಕ್ಕಂತೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕನ್ನು ವಿಜಯನಗರ ಕಾಲಕ್ಕೆ ಕರೆದೊಯ್ಯುವಂತೆ ಮಾಡಿತು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 110 ಸ್ಥಳೀಯ ಕಲಾವಿದರು ಪಾಲ್ಗೊಂಡಿದ್ದಾರೆ. ಭರತನಾಟ್ಯ ಪ್ರಮುಖ ಆಕರ್ಷಣೀಯವಾಗಿತ್ತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇದು ಕೇವಲ ಒಂದು ಮನೋರಂಜನಾ ಪ್ರದರ್ಶನವಲ್ಲ, ಶತಮಾನಗಳ ಹಿಂದೆ ವೈಭವದಿಂದ ಆಡಳಿತ ನಡೆಸಿದ ವಿಜಯನಗರ ಸಾಮ್ರಾಜ್ಯದ ಅರಸರ ಶೌರ್ಯ, ಪರಾಕ್ರಮ, ವಿಜಯನಗರ ಸಾಮ್ರಾಜ್ಯದ ಏಳು- ಬೀಳುಗಳನ್ನು ಜನಸಾಮಾನ್ಯರಿಗೆ ಕಣ್ಣಿಗೆ ಕಟ್ಟುವಂತೆ ತೋರಿಸುವ ಉದ್ದೇಶ ಹೊಂದಿದೆ.ಒಟ್ಟೂ 14 ದಿನಗಳ ಕಾಲ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತಿದೆ. ಫೆ. 19ರ ವರೆಗೆ ಹಂಪಿಯ ಆನೆಯಾಲ ಆವರಣದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಲಾವಿದರು ಮನೋಜ್ಞವಾಗಿ ಅಭಿನಯಿಸುತ್ತಿದ್ದಾರೆ. ಇದು ಉತ್ಸವದ ಪ್ರಮುಖ ಆಕರ್ಷಿಣೆಯಾಗಿದೆ.