ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭಾರತೀಯ ಪರಂಪರೆಯ ಕರಕುಶಲ ವಸ್ತುಗಳು ಚಿಕ್ಕಮಗಳೂರಿನ ಜನರಿಗೆ ಒಂದೇ ಸೂರಿನಡಿ ದೊರೆಯುವ ವ್ಯವಸ್ಥೆಯನ್ನು ಕಲಾಸುರಭಿ ಮಾಡಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ನಗರದ ಮೂಡಿಗೆರೆ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದಲ್ಲಿ ಕಲಾಸುರಭಿ ವತಿಯಿಂದ ಹಮ್ಮಿಕೊಂಡ ಸುರಭಿ ಹ್ಯಾಂಡ್‌ ಲೂಮ್‌ ಎಕ್ಸ್ಪೋ ಮಾರಾಟಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ರಿಯಾಯಿತಿ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಜನಸಾಮಾನ್ಯರು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು, ಮಕ್ಕಳು, ಯುವಕ, ಯುವತಿಯರಿಗೆ ಎಲ್ಲರಿಗೂ ಅಗತ್ಯವಿರುವ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆಗಳು ಲಭ್ಯ ಇವೆ ಎಂದರು.

ಮಾಲೀಕ ಅನ್ಸರ್‌ಆಲಿ ಮಾತನಾಡಿ, 40 ದಿನಗಳ ಕಾಲ ಮಾರಾಟ ಮಳಿಗೆ ತೆರೆಯಲಿದೆ. ದೇಶದ 15ಕ್ಕೂ ಅಧಿಕ ರಾಜ್ಯಗಳ ತಯಾರಕರು ಮತ್ತು ಮಾರಾಟಗಾರರು ಮೇಳದಲ್ಲಿ ಭಾಗವಹಿಸಿದ್ದಾರೆ. ಚಿಕ್ಕಮಗಳೂರಿನ ಜನರಿಗೆ ಗುಣಮಟ್ಟದ ಮತ್ತು ಅಪರೂಪದ ವಸ್ತುಗಳು ದೊರೆಯಬೇಕೆಂದು ಈ ಮೇಳ ಆಯೋಜಿಸಲಾಗಿದೆ ಎಂದರು.

ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಲ್.ಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯ್‌ಕುಮಾರ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಮಾಜಿ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಾಮೀಯಾ ಮಸೀದಿ ಅಧ್ಯಕ್ಷ ಮುದಸೀರ್ ಪಾಷ, ಸದಸ್ಯ ಅಕ್ಬರ್, ನಗರಸಭೆ ಸದಸ್ಯರಾದ ಶಾದಮ್ ಆಲೀಂಖಾನ್, ಖಲಂಧರ್ ಉಪಸ್ಥಿತರಿದ್ದರು.