ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಹುದಗಿರುವ ಪ್ರತಿಭೆಗೆ ಬೆಳವಣಿಗೆ ಸೂಕ್ತ ವೇದಿಕೆ ಕಲ್ಪಿಸಿದೆ

ಕನ್ನಡಪ್ರಭ ವಾರ್ತೆ ಮುಂಡರಗಿ

ಡಿಜಿಟಲ್ ಯುಗದಲ್ಲೂ ಕೈಬರಹಕ್ಕೆ ವಿಶಿಷ್ಟ ಮೌಲ್ಯವಿದ್ದು, ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಕೈಬರಹ ರೂಢಿಸಿಕೊಳ್ಳುವುದು ಶೈಕ್ಷಣಿಕ ಯಶಸ್ಸಿಗೆ ಮುಖ್ಯ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ವಸತಿ ಸಿಬಿಎಸ್ಇ ಶಾಲೆಯಲ್ಲಿ ಇತ್ತೇಚೆಗೆ ಭಾರತೀಯ ಅಂಚೆ ಇಲಾಖೆಯಿಂದ ನಡೆದ ರಾಷ್ಟ್ರೀಯ ಪತ್ರ ಬರೆಯುವ ಅಭಿಯಾನ 2025-26 ಸಾಲಿನ ನನ್ನ ಆದರ್ಶ ವ್ಯಕ್ತಿಗೊಂದು ಪತ್ರ ಎನ್ನುವ ವಿಷಯದ ಕುರಿತು ಪತ್ರ ಬರೆಯುವ ಸ್ಪರ್ಧೆಯ ವಲಯ ಮಟ್ಟದಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿ ಶ್ರಾವಣಿ ಕರಿಗಾರಗೆ ಸನ್ಮಾನಿಸಿ ಮಾತನಾಡಿದರು.

ಆಧುನಿಕ ಡಿಜಿಟಲ್ ಮಾಧ್ಯಮ, ತಂತ್ರಜ್ಞಾನದ ಜೊತೆ ಜೊತೆಗೆ ಪೆನ್ನು-ಪೇಪರ್ ಬಳಕೆಯನ್ನು ಉಳಿಸಿಕೊಳ್ಳಲು ಅಂಚೆ ಇಲಾಖೆ ವಿದ್ಯಾರ್ಥಿಗಳಲ್ಲಿ ಪತ್ರ ಬರೆಯುವ ಹವ್ಯಾಸವನ್ನು ಉತ್ತೇಜಿಸುವುದರೊಂದಿಗೆ, ಸಂವಹನ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಅಂಚೆ ಇಲಾಖೆಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಹುದಗಿರುವ ಪ್ರತಿಭೆಗೆ ಬೆಳವಣಿಗೆ ಸೂಕ್ತ ವೇದಿಕೆ ಕಲ್ಪಿಸಿದೆ ಎಂದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೀನ್ ದಯಾಳ ಸ್ಪರ್ಶ ಯೋಜನೆಯಡಿ ಪರೀಕ್ಷೆ ಆಯೋಜಿಸಲಾಗುತ್ತದೆ. ತೇರ್ಗಡೆಯಾದವರಿಗೆ ಪ್ರತಿ ವರ್ಷ ₹6000 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ ಮತ್ತು ಹಳೆಯ ಆಧಾರ್ ಕಾರ್ಡ್‌ಗಳ ತಿದ್ದುಪಡಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನವೀಕರಣ ಅವಕಾಶ ನೀಡಿದೆ. ಅಷ್ಟೇ, ಅಲ್ಲದೆ, ಸುಕನ್ಯಾ ಉಳಿತಾಯ ಖಾತೆಗಳು, ಅಂಚೆ ಜೀವ ವಿಮೆ ಜೊತೆಗೆ ವಿವಿಧ ಜನೋಪಯೋಗಿ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಇದೇ ವೇಳೆ 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ₹25 ಸಾವಿರ ನಗದು ಬಹುಮಾನ ಗಳಿಸಿದ ಗದಗ ಎ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ಸಿ. ಶಿರೂರ ಸಾಧನೆಯನ್ನು ಅಂಚೆ ಅಧಿಕಾರಿ ಎಸ್.ಐ. ನಾಯ್ಕರ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಪಾಲಕ ಹಾಲಪ್ಪ ವಾಮಕೇರಿ, ಪ್ರಾಚಾರ್ಯ ಶರಣಕುಮಾರ ಬುಗಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.