ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಹಂಗರಹಳ್ಳಿ ಬಳಿಯ ಸರ್ವೇ ನಂ 185ರ ಜಾಗವನ್ನು ಸರ್ವೇ ಮಾಡಲು ಬಂದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಅಡ್ಡಿ ಪಡಿಸಿ ವಾಪಸ್ ಕಳಿಸಿದ ಘಟನೆ ನಡೆದಿದೆ.ಗ್ರಾಮದ ಸರ್ವೇ ನಂ.185 ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ, ಇದು ಡೀಮ್ಡ್ ಅರಣ್ಯಕ್ಕೆ ಸೇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಲು ಬಂದಿದ್ದರು. ಈ ವಿಷಯ ತಿಳಿದ ಹಂಗರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೊದಲು ಗೋಮಾಳದ ಜಾಗದ ಸರ್ವೇ ಮಾಡಿ ಜಾಗ ಗುರುತಿಸಿಕೊಡಿ ಎಂದು ಆಗ್ರಹಿಸಿದರು.
ಈಗಾಗಲೇ ಎರಡು ಬಾರಿ ಸರ್ವೇ ಕಾರ್ಯ ಮಾಡಿ ಅದನ್ನು ಅಂಗೀಕರಿಸಿಲ್ಲ. ಆದರೂ ಮೇಲಿಂದ ಮೇಲೆ ಸರ್ವೇ ಕಾರ್ಯ ನಡೆಯುತ್ತಿದೆ. ಜೊತೆಗೆ ಈಗಾಗಲೇ ಸರ್ಕಾರಿ ಮಂಜೂರಾತಿ ಮಾಡಿರುವ ಸ್ಥಳವನ್ನು ಮೊದಲು ಗುರುತು ಮಾಡಿಕೊಡುವಂತೆ ಪಟ್ಟು ಹಿಡಿದರು.ಈ ವೇಳೆ ಸರ್ವೇ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ಅಲ್ಲದೇ, ತಮ್ಮನ್ನು ಈ ಜಾಗದಿಂದ ಒಕ್ಕಲೆಬ್ಬಿಸಲು ಸ್ಥಳೀಯ ಶಾಸಕರು ಹುನ್ನಾರ ನಡೆಸುತ್ತಿದ್ದಾರೆ. ಜೊತೆಗೆ ಈ ಸರ್ವೇ ನಂಬರ್ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಯತ್ನಿಸುಸಲು ಅಧಿಕಾರಿಗಳ ಮೂಲಕ ಶಾಸಕರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವಿಷಯವಾಗಿ ಸಂಸದ ಎಚ್.ಡಿ ಕುಮಾರಸ್ವಾಮಿ ಅವರು ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ. ಹಾಗಾಗಿ ಏ.22 ರವರೆಗೆ ನಮಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಮೊದಲು ಅಧಿಕಾರಿಗಳು ಕಾಲಾವಕಾಶ ಕೊಡಲು ನಿರಾಕರಿಸಿದರು. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳು ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿ ಅವರಿಂದ ಮೌಖಿಕ ಆದೇಶದ ಮೇರೆಗೆ ಏ.25 ರವರೆಗೆ ಕಾಲಾವಕಾಶ ನೀಡಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.ಅಂಬೇಡ್ಕರ್ ಜಯಂತಿ ಆಚರಣೆಕಿಕ್ಕೇರಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯಿಂದ ಸೋಮವಾರ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಆರ್.ಕೃಷ್ಣ, ಪಿಡಿಒ ಚಲುವರಾಜ್, ಪುಟ್ಟೇಗೌಡ, ಪಾಪೇಗೌಡ, ವಾಸು, ಪೌರ ಕಾರ್ಮಿಕರಾದ ಚಾಮುಂಡಿ, ನಾಗರಾಜು, ಸೋಮ, ಸಂತೋಷ, ಮಮತಾ, ಮಂಗಳಗೌರಿ, ಧರ್ಮಮ್ಮ ಇದ್ದರು.