ದೊಡ್ಡಬಳ್ಳಾಪುರದೆಲ್ಲೆಡೆ ಹನುಮ ಜಯಂತಿ ಸಂಭ್ರಮ

| Published : Dec 25 2023, 01:31 AM IST

ದೊಡ್ಡಬಳ್ಳಾಪುರದೆಲ್ಲೆಡೆ ಹನುಮ ಜಯಂತಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ನಗರ ಮತ್ತು ತಾಲೂಕಿನ ನೂರಾರು ಹನುಮ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಅಂಜನಾಪುತ್ರನಿಗೆ ಎಲ್ಲೆಲ್ಲೂ ವಿಶೇಷಾಲಂಕಾರ, ಪೂಜಾ ಕಾರ್‍ಯಕ್ರಮಗಳು ನಡೆದವು. ಹನುಮ ಮಂದಿರಗಳಲ್ಲಿ ಬೆಳಗ್ಗಿನಿಂದಲೇ ಜನಜಾತ್ರೆ ಕಂಡು ಬಂತು. ಸಾವಿರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ದೊಡ್ಡಬಳ್ಳಾಪುರ: ನಗರ ಮತ್ತು ತಾಲೂಕಿನ ನೂರಾರು ಹನುಮ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಅಂಜನಾಪುತ್ರನಿಗೆ ಎಲ್ಲೆಲ್ಲೂ ವಿಶೇಷಾಲಂಕಾರ, ಪೂಜಾ ಕಾರ್‍ಯಕ್ರಮಗಳು ನಡೆದವು. ಹನುಮ ಮಂದಿರಗಳಲ್ಲಿ ಬೆಳಗ್ಗಿನಿಂದಲೇ ಜನಜಾತ್ರೆ ಕಂಡು ಬಂತು. ಸಾವಿರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ಕಲ್ಲಿನ ಗದೆ ಲೋಕಾರ್ಪಣೆ:

ಇಲ್ಲಿನ ಶ್ರೀನೆಲದಾಂಜನೇಯಸ್ವಾಮಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ಇತಿಹಾಸ ಪ್ರಸಿದ್ದ ಶ್ರೀನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಆವರಣದಲ್ಲಿ ಸ್ಥಾಪಿಸಿರುವ ಕಲ್ಲಿನ ಗದೆಯನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು. ಹೋಮ-ಹವನ, ಧಾರ್ಮಿಕ ಉತ್ಸವಗಳು ನಡೆದವು.

ಆಂಜನೇಯಸ್ವಾಮಿಗೆ ಅಭಿಷೇಕ, ಪೂಜಾ ಕಾರ್‍ಯಕ್ರಮ ನಡೆದವು. ಶ್ರೀಸ್ವಾಮಿಗೆ ಬೆಳ್ಳಿ ಕವಚ, ಪುಷ್ಪಾಲಂಕಾರ ಹಮ್ಮಿಕೊಳ್ಳಲಾಗಿತ್ತು. ದೇಗುಲ ಹೊರ ಆವರಣ ಹಾಗೂ ಒಳಾಂಗಣದಲ್ಲಿ ಹೂಗಳಿಂದ ಶಂಕು, ಚಕ್ರ, ತಿರುನಾಮ, ಗದೆ ಸೇರಿದಂತೆ ವಿವಿಧ ಆಕೃತಿಗಳನ್ನು ಚಿತ್ತಾಕರ್ಷಕವಾಗಿ ಬಿಡಿಸಲಾಗಿತ್ತು. ಸಾವಿರಾರು ಜನರು ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಶ್ರೀ ಸ್ವಾಮಿಗೆ ಬೆಳ್ಳಿ ಕವಚಧಾರಣೆ ಮಾಡಲಾಗಿತ್ತು.

ರೋಜಿಪುರದಲ್ಲಿ ಬ್ರಹ್ಮರಥೋತ್ಸವ:

ಇಲ್ಲಿನ ರೋಜಿಪುರ-ಗಂಗಾಧರಪುರ ಬಡಾವಣೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಬ್ರಹ್ಮರಥೋತ್ಸವ ನಡೆಯಿತು. ಅಲಂಕೃತ ತೇರಿನಲ್ಲಿ ಶ್ರೀಸ್ವಾಮಿಯನ್ನು ಮೆರವಣಿಗೆ ಮಾಡಲಾಯಿತು.

ರಾಜಘಟ್ಟದಲ್ಲಿ ಹನುಮ ವೈಭವ:

ತಾಲೂಕಿನ ಸುಪ್ರಸಿದ್ದ ಹನುಮ ಕ್ಷೇತ್ರ ಎನಿಸಿರುವ ರಾಜಘಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆದವು. ದೇವಾಲಯದ ಮೂಲ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಹಲವೆಡೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಬನ್ನಿಮಂಗಲದಲ್ಲಿ ಸಂಭ್ರಮ:

ಇಲ್ಲಿಗೆ ಸಮೀಪದ ಕುಂದಾಣ ಹೋಬಳಿ ಬನ್ನಿಮಂಗಲ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ನೇತೃತ್ವದಲ್ಲಿ ಹನುಮ ಜಯಂತಿ ಅಂಗವಾಗಿ ಹೋಮ, ಉತ್ಸವ ಹಾಗೂ ವಿನಾಯಕ ಸ್ವಾಮಿ ಹೋಮ ಹಮ್ಮಿಕೊಳ್ಳಲಾಗಿತ್ತು.

ಮಾರುತಿ ನಾಮಸ್ಮರಣೆ:

ಇಲ್ಲಿನ ಅರಳುಮಲ್ಲಿಗೆ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ, ಉತ್ಸವ ನಡೆದವು. ಅದೇ ರೀತಿ ಕಚೇರಿ ಆವರಣದಲ್ಲಿರುವ ಹನುಮ ಮಂದಿರ, ಶಿವಪುರ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ರಂಗಪ್ಪ ವೃತ್ತದಲ್ಲಿರುವ ಬಾಲಾಂಜನೇಯ ದೇವಾಲಯ, ರಾಮಣ್ಣನ ಬಾವಿ ಬಳಿಯ ರಾಮಾಂಜನೇಯಸ್ವಾಮಿ ದೇವಾಲಯ, ಖಾಸ್‌ಬಾಗ್‌ನ ಹನುಮ ದೇವಾಲಯ, ರೈಲು ನಿಲ್ದಾಣ ಬಳಿಯ ಆಂಜನೇಯಸ್ವಾಮಿ ದೇವಾಲಯ, ಶಾಂತಿನಗರದ ಹನುಮ ಮಂದಿರ, ಮಜರಾಹೊಸಹಳ್ಳಿ ಅಭಯ ಆಂಜನೇಯ, ಬಾಶೆಟ್ಟಿಹಳ್ಳಿ ಆಂಜನೇಯ ಸೇರಿದಂತೆ ಊರಿನ ಬೀದಿ ಬೀದಿಗಳಲ್ಲೂ ಹನುಮನ ನಾಮಸ್ಮರಣೆ ನಡೆದವು.

24ಕೆಡಿಬಿಪಿ1-

ನೆಲದಾಂಜನೇಯಸ್ವಾಮಿಗೆ ಬೆಳ್ಳಿಕವಚ ವಿಶೇಷಾಲಂಕಾರ.24ಕೆಡಿಬಿಪಿ3-

ರೋಜಿಪುರ ಆಂಜನೇಯನಿಗೆ ಡ್ರೈಫ್ರೂಟ್‌ ಅಲಂಕಾರ.

24ಕೆಡಿಬಿಪಿ4-

ನೆಲದಾಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಕಲ್ಲಿನ ಗದೆ ಲೋಕಾರ್ಪಣೆ.