ಚಂದಾವರ ಸೀಮೆ ಹನುಮನ ಮೂಲಮೂರ್ತಿ ಪ್ರತಿಷ್ಠಾಪನೆ

| Published : Mar 18 2024, 01:55 AM IST

ಚಂದಾವರ ಸೀಮೆ ಹನುಮನ ಮೂಲಮೂರ್ತಿ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ಸ್ಥಿರತೆಗಾಗಿ ಹನುಮಂತದ ಆರಾಧನೆ ಬಹುಮುಖ್ಯ.

ಕುಮಟಾ: ಸೀಮೆದೇವರು ಚಂದಾವರದ ಹನುಮಂತ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮ ಮಾ. ೧೬ರಿಂದ ಆರಂಭಗೊಂಡಿದ್ದು, ಭಾನುವಾರ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠೆ ವಿಧ್ಯುಕ್ತವಾಗಿ ನಡೆಯಿತು. ಸಹಸ್ರಾರು ಭಕ್ತಾದಿಗಳು ತಮ್ಮ ಆರಾಧ್ಯ ದೇವ ಹನುಮನ ಸುಂದರ ಮೂರ್ತಿಯನ್ನು ಮಂದಿರದ ಸಾಲಂಕೃತ ಪೀಠದಲ್ಲಿ ವಿರಾಜಮಾನಗೊಳ್ಳುವುದನ್ನು ಕಣ್ತುಂಬಿಕೊಂಡರು.

ಸೀಮೆ ಹನುಮಂತ ದೇವರ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಸಿದ್ದಾಪುರ ಶಿರಳಗಿಯ ಬ್ರಹ್ಮಾನಂದ ಭಾರತೀ ಶ್ರೀಗಳು ಉದ್ಘಾಟಿಸಿ, ನಮ್ಮ ಕನ್ನಡ ನಾಡು ಹನುಮನುದಿಸಿದ ನಾಡು. ಮಾನಸಿಕ ಸ್ಥಿರತೆಗಾಗಿ ಹನುಮಂತದ ಆರಾಧನೆ ಬಹುಮುಖ್ಯ. ವಿನಯ, ವಿಧೇಯತೆ, ನಿರಹಂಕೃತಿ ಮುಂತಾದ ಸದ್ಗುಣಗಳೇ ಮಾನವನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ. ಹನುಮನ ಅನುಸರಿಸಿದರೆ ಸಕಲ ಕಷ್ಟಕೋಟಲೆಗಳು ದೂರ, ರಾಮಾಯಣದ ಮೌಲ್ಯಗಳು ಬದುಕಿಗೆ ಸಾರ್ಥಕತೆ ತಂದುಕೊಡುತ್ತವೆ. ರಾಮಾಯಣದಲ್ಲಿ ಎಲ್ಲ ಪಾತ್ರಗಳಿಗೆ ಜೀವ ತುಂಬಿದ್ದೇ ಆಂಜನೇಯ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾಡಿನ ಸಂಸ್ಕೃತಿಯನ್ನು ಕಾಪಾಡುವ ಅಗತ್ಯವಿದೆ. ಹಾಲಕ್ಕಿ ಸಮಾಜದವರು ಸೇರಿ ಅನೇಕ ಸಮಾಜದವರು ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮವನ್ನು ಕಾಪಾಡಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಚಂದಾವರ ಸೀಮೆ ಹನುಮಂತ ದೇವರ ಟ್ರಸ್ಟ್ ಹಾಗೂ ಎಲ್ಲ ಭಕ್ತರ ಇಂತಹ ಮಹಾನ್ ಕಾರ್ಯಗಳು ಧರ್ಮರಕ್ಷಣೆಗೆ ಕಾರಣ ಎಂದರು.

ಮೊಕ್ತೇಸರ ಮಂಡಳಿಯ ಎ.ಆರ್. ನಾಯ್ಕ, ಎನ್.ಎಸ್. ನಾಯ್ಕ, ದೇವು ಗೌಡ, ಎಂ.ಕೆ. ಪಟಗಾರ, ಉಮೇಶ ನಾಯ್ಕ, ಉದ್ಯಮಿ ಧೀರು ಶಾನಭಾಗ, ಮಂಜುನಾಥ ಎಲ್. ನಾಯ್ಕ, ಜಿ.ಜಿ. ಶಂಕರ, ಜೆ.ಟಿ. ಪೈ, ಆರ್.ಜಿ. ನಾಯ್ಕ, ಎಚ್.ಆರ್. ನಾಯ್ಕ, ಆನಂದ ವೈ. ನಾಯ್ಕ, ಎಂ.ಟಿ. ಗೌಡ ಇತರರು ಇದ್ದರು. ಸಾಯಂಕಾಲ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಬಂದು ದೇವರ ದರ್ಶನ ಪಡೆದರು.

ಭಾನುವಾರ ಪುನರ್ ಪ್ರತಿಷ್ಠಾಂಗ ಕಾರ್ಯಕ್ರಮಗಳು ಮುಂದುವರಿದು, ವೇ. ಕೃಷ್ಣ ಷಡಕ್ಷರಿಯ ಆಚಾರ್ಯತ್ವದಲ್ಲಿ ವೈದಿಕರು ಹೋಮಹವನಾದಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಮಧ್ಯಾಹ್ನ ನಡೆದ ಧರ್ಮಸಭೆಯಲ್ಲಿ ಶ್ರೀರಾಮ ಚರಿತ ಕುರಿತು ನಾರಾಯಣ ಯಾಜಿ ಸಾಲೆಬೈಲು ಪ್ರವಚನ ನೀಡಿದರು. ಕಾರ್ಯಕ್ರಮದುದ್ದಕ್ಕೂ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಭರತನಾಟ್ಯ, ಜಾನಪದ ನೃತ್ಯ, ಹಾಲಕ್ಕಿ ಜಾನಪದ, ಪಂ. ವೆಂಕಟೇಶ ಕುಮಾರ ಅವರಿಂದ ಸಂಗೀತ ಮತ್ತು ಭಜನೆ, ಹರಿದಾಸ ಡಿ.ಆರ್. ಹೆಗಡೆ ಅವರಿಂದ ಹರಿಕಥೆ, ಪುತ್ತೂರು ನರಸಿಂಹ ನಾಯಕ ತಂಡದಿಂದ ಭಜನೆ, ನಗರೆ ತಂಡದಿಂದ ಕೋಲಾಟ ಹಾಗೂ ಯಕ್ಷಗಾನ ಪ್ರದರ್ಶನಗಳು ನಡೆದವು.