ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಚಿನ್ನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಮೈಸೂರಿನ ಶೇಷಾದ್ರಿಪುರಂ ಇನ್ಸಿಟ್ ಆಫ್ ಟೆಕ್ನಾಲಜಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಮರಳಗಾಲ ಗ್ರಾಮದ ಸುಶೀಲಮ್ಮ ರಾಮೇಗೌಡ ಅವರ ಜಮೀನಿನಲ್ಲಿ ಭತ್ತದ ನಾಟಿ ಮೂಲಕ ಶ್ರಮದಾನ ಮಾಡಿದರು.ನಂತರ ಎನ್ಎಸ್ಎಸ್ ಘಟಕದ ಅಧಿಕಾರಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕತ ಡಾ.ರಾಘವೇಂದ್ರ ಮಾತನಾಡಿ, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಭತ್ತ ಹೇಗೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಅರಿವಿಲ್ಲ. ಅದು ಮರಗಳಿಂದ ಬಿಡುವುದು ಎಂಬ ನಂಬಿಕೆಯಲ್ಲಿದ್ದಾರೆ. ಇಂದು ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವ್ಯವಸಾಯದ ಭತ್ತ ಬೆಳೆ ಅನುಭವವನ್ನು ಪಡೆಯಲು ಭತ್ತ ನಾಟಿ ಕೆಲಸಗಳಲ್ಲಿ ತಲೀನರಾಗಿದ್ದಾರೆ. ರೈತರ ನಿಜ ಬದುಕನ್ನು ಅರ್ಥೈಸಿಕೊಂಡಿದ್ದಾರೆ ಎಂದರು.
ಜಮೀನಿನ ಮಾಲೀಕರಾದ ಸುಶೀಲಮ್ಮ ರಾಮೇಗೌಡ ಮಾತನಾಡಿ, ಶಿಬಿರಾರ್ಥಿಗಳು ನಮ್ಮ ಜಮೀನಿನ ಭತ್ತದ ನಾಟಿ ಕಾರ್ಯದಲ್ಲಿ ತಮ್ಮ ಶ್ರಮದಾನ ಮಾಡಿದ್ದು, ವಿದ್ಯಾರ್ಥಿಗಳು ತನ್ನ ಓದಿನ ಜೊತೆ ಜೊತೆಗೆ ವ್ಯವಸಾಯದ ಅನುಭವಗಳನ್ನು ರೂಢಿಸಿಕೊಂಡರೆ ಒಳಿತು ಎಂದರು.ಈ ವೇಳೆ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಜಯಶಂಕರ್, ಗ್ರಾಮದ ರೈತ ಸೋಮಶೇಖರ್, ರೈತ ಕಾರ್ಮಿಕರಾದ ಪರಮೇಶ್, ರಾಜಣ್ಣ, ಶಾಂತಮ್ಮ, ಎನ್ಎಸ್ಎಸ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.ಶಂಭೂನಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಕೆ.ಬೆಟ್ಟಹಳ್ಳಿಯ ಶ್ರೀಲಕ್ಷ್ಮೀದೇವಿ ಹಬ್ಬದ ಅಂಗವಾಗಿ ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ಎಸ್ ವಿದ್ಯಾರ್ಥಿಗಳು ಶಂಭೂನಹಳ್ಳಿ ಗ್ರಾಮದ ದೇವಸ್ಥಾನ ಹಾಗೂ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಶ್ರಮದಾನ ಮಾಡಿ ಪರಿಸರ ಸ್ವಚ್ಛತೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರಮದಾನ ಮಾಡಿದ ಶಿಬಿರಾರ್ಥಿಗಳು ದೇವಸ್ಥಾನದ ಬಳಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಅಲ್ಲದೇ, ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು.ಈ ವೇಳೆ ಶಂಭೂನಹಳ್ಳಿ ಗ್ರಾಮದ ಮುಖಂಡ ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್, ಎನ್ ಎಸ್ ಎಸ್ ಅಧಿಕಾರಿ ಶಂಕರ್, ಉಪನ್ಯಾಸಕರಾದ ರವಿಕುಮಾರ್, ಶ್ರೀನಿವಾಸ್, ಪುಟ್ಟರಾಮೇಗೌಡ, ಚಂದ್ರು, ಚೈತ್ರಾ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಇತರರಿದ್ದರು.