ಉನ್ನತ ಹುದ್ದೆ ಅಲಂಕರಿಸಲು ಕಠಿಣ ಶ್ರಮ ಅಗತ್ಯ

| Published : Mar 11 2024, 01:16 AM IST

ಸಾರಾಂಶ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಹುದ್ದೆ ಅಲಂಕರಿಸಬೇಕಾದರೆ ಶಿಕ್ಷಣ ಹಾಗೂ ಕಠಿಣ ಪರಿಶ್ರಮ ಅಗತ್ಯ.

ಚಿತ್ರದುರ್ಗ: ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಹುದ್ದೆ ಅಲಂಕರಿಸಬೇಕಾದರೆ ಶಿಕ್ಷಣ ಹಾಗೂ ಕಠಿಣ ಪರಿಶ್ರಮ ಅಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಗುಡ್ಡದೇಶ್ವರಪ್ಪ ಹೇಳಿದರು.

ನ್ಯಾಯಾಧೀಶ ಹುದ್ದೆಗೆ ನೇಮಕಗೊಂಡಿರುವ ಕೋಡೇನಹಟ್ಟಿಯ ಟಿ.ಸುಮಾ ಅವರನ್ನು ನಾಯಕ ಸಮಾಜದವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಹೆಚ್ಚು ಶ್ರಮಿಕರಿರುವ ಈ ಗ್ರಾಮದಲ್ಲಿ ಟಿ.ಸುಮಾ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಎರಡು ಬಾರಿ ಪ್ರಯತ್ನಿಸಿ 3ನೇ ಬಾರಿಗೆ ಯಶಸ್ವಿಯಾಗಿದ್ದಾರೆ. ತಂದೆ ತಿಪ್ಪೇಸ್ವಾಮಿ ಆಟೋ ಚಾಲಕ, ತಾಯಿ ಗೃಹಿಣಿಯಾಗಿದ್ದುಕೊಂಡು ಮಗಳಿಗೆ ಕಾನೂನು ಶಿಕ್ಷಣ ಕೊಡಿಸಿರುವುದು ಕಮ್ಮಿ ಸಾಧನೆಯಲ್ಲ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಬಳಸಿಕೊಂಡು ಮೇಲೆ ಬರಬೇಕು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಶೋಷಿತ ಸಮಾಜವನ್ನು ಬಡಿದೆಬ್ಬಿಸುತ್ತಿದೆ. ನ್ಯಾಯಾಧೀಶೆಯಾಗಿ ನೇಮಕಗೊಂಡಿರುವ ಟಿ.ಸುಮಾ ಮುಂದೆ ಸಾಕಷ್ಟು ಸವಾಲುಗಳಿವೆ. ದುರ್ಬಲರು, ಶೋಷಿತರಿಗೆ ನ್ಯಾಯ ಒದಗಿಸಬೇಕು. ಘನತೆಯಿರುವ ಹುದ್ದೆಗೆ ಏರಿ ನಾಯಕ ಸಮಾಜ ಹಾಗೂ ಕೋಡೇನಹಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಜೀವನದಲ್ಲಿ ಇನ್ನು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಟಿ.ಸುಮಾ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಕೇವಲ ನಾಯಕ ಸಮಾಜಕ್ಕಷ್ಟೆ ಅಲ್ಲ ಇಡೀ ಕೋಡೇನಹಟ್ಟಿ ಗ್ರಾಮವೇ ಖುಷಿ ಪಡುವ ವಿಚಾರ. ಎಲ್ಲರ ಆಶೀರ್ವಾದ ಅವರ ಮೇಲಿರಲಿ ಎಂದು ಹೇಳಿದರು. ನಗರಸಭೆ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ತಿಪ್ಪೇಸ್ವಾಮಿ, ನಾಯಕ ಸಮಾಜದ ಮುಖಂಡರುಗಳಾದ ಡಿ.ಗೋಪಾಲಸ್ವಾಮಿ ನಾಯಕ, ಮಹಂತೇಶ್, ಯುವ ನ್ಯಾಯವಾದಿ ಅಶೋಕ್‍ ಬೆಳಗಟ್ಟ, ಸಣ್ಣಸ್ವಾಮಿ, ತಿಪ್ಪೇಸ್ವಾಮಿ, ಮಂಜುನಾಥ, ಚನ್ನಕೇಶವ, ಬೈಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.