ಹರಿನಾಥ ಮಹಾರಾಜರ ಅಡ್ಡ ಪಲ್ಲಕ್ಕಿ ಉತ್ಸವ

| Published : Jul 23 2024, 12:36 AM IST

ಸಾರಾಂಶ

ಕಮಲನಗರ್ ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಸದ್ಭಕ್ತರಿಂದ ಸಂತ ಹರಿನಾಥ ಮಹಾರಾಜರ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಕಮಲನಗರ

ತಾಲೂಕಿನ ಹೊಳಸಮುದ್ರ ಗ್ರಾಮದ ಸಂತ ಸದ್ಗುರು ಹರಿನಾಥ ಮಹಾರಾಜರ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಪ್ರತಿವರ್ಷ ಆಷಾಢ ಮಾಸದಲ್ಲಿ ಮೂರು ದಿನಗಳವರೆಗೆ ಪ್ರತಿನಿತ್ಯ ಸದ್ಗುರು ಸಂತ ಹರಿನಾಥ ಮಹಾರಾಜರ ಮಂದಿರದಲ್ಲಿ ಭಜನೆ, ಕಿರ್ತನೆ, ಬಾರುಢ, ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಕೊನೆ ದಿನ ಸಮಾರೋಪ ಸಮಾರಂಭ ಹಾಗೂ ಧರ್ಮ ಜಾಗೃತಿ ಅಂಗವಾಗಿ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿತು.

ಈ ವೇಳೆ ಗೋಪಾಳರಾವ ಪಾಟೀಲ್ ಮಾತನಾಡಿ, ಸಂತ ಹರಿನಾಥ ಮಹಾರಾಜರು ಹಿಂದು-ಮುಸ್ಲಿಂರ ಮಧ್ಯೆ ಧಾರ್ಮಿಕ ಸಾಮರಸ್ಯ ಮೂಡಿಸಲು ಹಾಗೂ ಪ್ರೀತಿ ವಿಶ್ವಾಸದ ಬದುಕು ರೂಪಿಸಲು ಧರ್ಮ ಪ್ರಚಾರ ಕೈಗೊಂಡರು.

ಪರಮ ಶಿಷ್ಯ ಕೇಶವನಾಥ ಮಹಾರಾಜರ ಜತೆಗೂಡಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚರಿಸಿ ಸತ್ಯ, ಅಹಿಂಸೆ ಮತ್ತು ಭಕ್ತಿ ಮಾರ್ಗದ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು ಎಂದು ಸಾರಿ ಹೇಳಿದ್ದರು ಎಂದರು.

ಗ್ರಾಮದ ಪ್ರಮುಖ ರಸ್ತೆಯ ಮೂಲಕ ಹನುಮಾನ ಮಂದಿರ, ಗ್ರಾಪಂ ಕಚೇರಿಯಿಂದ ಹೊರವಲಯದ ಹನುಮಾನ್ ಮಂದಿರವರೆಗೆ ಅಡ್ಡ ಪಲ್ಲಕ್ಕಿ ತೆರಳಿದ ಸಂದರ್ಭದಲ್ಲಿ ವಿಶೇಷ ರೂಪದಲ್ಲಿ ಮುತ್ತೈದೆಯರು ಪೂಜೆ ಸಲ್ಲಿಸಿದ ಬಳಿಕ ಪ್ರಸಾದ ವಿತರಿಸಿದರು.

ಅಡ್ಡಪಲ್ಲಕ್ಕಿ ಮೆರವಣಿಗೆ ಉದ್ದಕ್ಕೂ ಹರಿನಾಥ ಮಹಾರಾಜ ಯುವಕ ಸಂಘ, ಭಜನಾ ಮಂಡಳಿ, ಅಕ್ಕನ ಬಳಗ ಭಜನ ಮಂಡಳಿ ಸದಸ್ಯರು, ಹಾಡುವ ಭಾರುಡ, ಭಜನೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಆಷಾಢ ಮಾಸದ ನಿಮಿತ್ತ ಪ್ರತಿದಿನ ಜೀವಂತ ಸಮಾಧಿಗೆ ವಿಶೇಷ ರುದ್ರಾಭಿಷೇಕ ಪೂಜೆ, ಬಿಲ್ವಾರ್ಚನೆ ಪೂಜೆ ಪುನಸ್ಕಾರ ಕಾರ್ಯಕ್ರಮಗಳು ನಡೆದವು.

ಅದ್ಧೂರಿ ಮೆರವಣಿಗೆಯೊಂದಿಗೆ ಮಂಗಲವಾದ್ಯಗಳಿಂದ ಹೊರಟ ಉತ್ಸವ ನೋಡುಗರಿಗೆ ಗಮನ ಸೆಳೆಯಿತು.

ಈ ವೇಳೆ ವಿಜಯಕುಮಾರ್ ನೂದನೂರೆ, ಸಂಗಮೇಶ್ ಮರ್ಕೆ ಸೇರಿ ಅನೇಕರು ಭಾಗವಹಿಸಿದ್ದರು.