ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಮ್ಮ ರಾಷ್ಟ್ರೀಯ ನಾಯಕರ ಓಲೈಕೆ ಭರಾಟೆಯಲ್ಲಿ ಕಳೆದ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ನಜೀರ್ ಅಹ್ಮದ್ ಅಸಾಂವಿಧಾನಿಕ ಪದ ಬಳಕೆ ಮಾಡುವುದರ ಮೂಲಕ ಇಡೀ ಅಧಿವೇಶನವನ್ನೇ ಆಪೋಷನ ಮಾಡಿದ್ದ ಕಾರಣಕ್ಕಾಗಿ ಅವರು ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯವಾಗಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಫೆಬ್ರವರಿ ಮಾಹೆಯಲ್ಲಿ ಕರೆಯುವ ಸಂಪ್ರದಾಯವಿದೆ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರದ ವಿಬಿಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಲೆಂದೇ ಸಂಪ್ರದಾಯ ಮುರಿದು ಜನವರಿ ಅಂತ್ಯದಲ್ಲಿಯೇ ಅಧಿವೇಶನವನ್ನು ಕರೆದಿದ್ದರು. ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣದಲ್ಲಿ ಮೊದಲನೇ ಪ್ಯಾರಾ ಮತ್ತು ಕೊನೆಯ ಪ್ಯಾರಾಗಳನ್ನು ಮಾತ್ರ ಓದಿ ತಮ್ಮ ಭಾಷಣವನ್ನು ಮುಗಿಸಿದ್ದರು. ತದನಂತರ ಸದನದಿಂದ ಹೊರನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್, ಎಸ್. ರವಿ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದಲ್ಲದೆ, ಅತ್ಯಂತ ಅಮಾನವೀಯ ರೀತಿಯಲ್ಲಿ ತಮ್ಮ ನಡವಳಿಕೆಗಳನ್ನು ಪ್ರದರ್ಶಿಸಿದರು. ಸಂಪೂರ್ಣ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರಿಗೆ ಮತ್ತು ಸದನಕ್ಕೆ ತೋರಿದ ಅಗೌರವವಾಗಿದೆ. ಇದು ಯುವ ಪೀಳಿಗೆಗೆ ಯಾವ ರೀತಿಯಲ್ಲಿ ಕೊಂಡೊಯ್ಯಬೇಕು ಎನ್ನುವುದೇ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.
ಸಭಾಪತಿ ಬಸವರಾಜ್ ಹೊರಟ್ಟಿ ಹರಿಪ್ರಸಾದ್ ಅವರ ಹಿರಿತನಕ್ಕೆ ಗೌರವಕೊಟ್ಟು ಅವರಿಗೆ ಮಾತನಾಡಲು ಎಲ್ಲಾ ಅವಕಾಶಗಳನ್ನು ನೀಡಿದ್ದರೂ ಹರಿಪ್ರಸಾದ್ ಅದಕ್ಕೆ ಯಾವುದೇ ಗೌರವ ನೀಡದೆ ಇಡೀ ಸದನವನ್ನು ಅವಮಾನಿಸಿದರು. ಅವರ ನಡವಳಿಕೆ ಬಗ್ಗೆ ಚರ್ಚೆಯಾಗಲೇ ಇಲ್ಲ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಗಳು ನಡೆದು ಸಾರ್ವಜನಿಕರಲ್ಲಿ ಇವರ್ಯಾರೂ ಸರಿಯಿಲ್ಲ ಎಂಬ ಭಾವನೆ ಮೂಡುವಂತಾಗಿದ್ದು, ಅತ್ಯಂತ ಖೇದಕರ ಸಂಗತಿ ಎಂದರು.ರಾಜ್ಯಪಾಲರು ತಮ್ಮ ಭಾಷಣ ಮುಗಿದ ಬಳಿಕ ಸದನದಿಂದ ಹೊರ ನಡೆಯುತ್ತಿರುವಾಗ ಕಾಂಗ್ರೆಸ್ ಸದಸ್ಯರಿಂದ ಗಲಾಟೆ ಆರಂಭವಾಗಿ, ರಾಷ್ಟ್ರಗೀತೆ ಹೇಳುವ ಸಂದರ್ಭ ಇದ್ದರೂ ಅದು ನಡೆಯಲಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಸೇರಿ ಸಚಿವ ಎಚ್.ಕೆ. ಪಾಟೀಲ್ ಅವರಿಂದ ರಾಷ್ಟ್ರಗೀತೆಗೆ ಬಿಜೆಪಿಯವರು ಅವಮಾನ ಮಾಡಿದ್ದಾರೆ ಎಂಬ ಸುಳ್ಳನ್ನೂ ಹೇಳಿಸಲಾಯಿತು ಎಂದು ಕಿಡಿಕಾರಿದರು.
ಇತ್ತೀಚೆಗೆ ಹೊನ್ನಾಳಿಯ ಗೋಪಗೊಂಡನಹಳ್ಳಿಯಲ್ಲಿ ಅಲ್ಲಿಯ ನೂತನ ಗ್ರಾಪಂ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಅಭಿವೃದ್ಧಿ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರದ ವಿಬಿಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸುವಂತೆ ಸಾರ್ವಜನಿಕರಿಗೆ ಕರೆಕೊಟ್ಟಿದ್ದು ಖಂಡನೀಯ ಎಂದರು.
ಮೆಟ್ರೋ ಟಿಕೆಟ್ ದರ ಏರಿಸಿದ್ದು ರಾಜ್ಯ ಸರ್ಕಾರ. ಇದು ಸರಿಯಲ್ಲ ಎಂದ ಅವರು, ಸಾಗರದ ಕ್ರಿಕೆಟ್ ಮೈದಾನದಲ್ಲಿ ಹೆಲಿ ಟೂರಿಸಂಗಾಗಿ ಹೆಲಿಪ್ಯಾಡ್ ಬಳಸಿದ್ದು ಕೂಡ ಸರಿಯಲ್ಲ. ಇದರಿಂದ ಕ್ರೀಡಾಂಗಣ ಹಾಳಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಧಾನ ಕಾರ್ಯದರ್ಶಿ ಶಿವರಾಜು, ಸಿ.ಎಚ್.ಮಾಲತೇಶ್, ರಶ್ಮೀ ಶ್ರೀನಿವಾಸ್, ಸುರೇಖಾ ಮರಳೀಧರ್, ವೀಣಾನಾಗರಾಜ್, ಸುಮಲತಾ ಭೂಪಾಳಂ, ಚಂದ್ರಶೇಖರ್ ಇತರರು ಇದ್ದರು.ಕಾಂಗ್ರೆಸ್ನಿಂದ ಜನಪರ ಕಾರ್ಯ ಮರೀಚಿಕೆ
ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಚಿರತೆಯೊಂದರ ಸ್ಕ್ಯಾನಿಂಗ್ ಮಾಡಿದ್ದು ನೋಡಿದರೆ ಇನ್ನು ಮುಂದೆ ಮನುಷ್ಯರ ಆಸ್ಪತ್ರೆಗಳಲ್ಲಿ ಪ್ರಾಣಿಗಳ ಚಿಕಿತ್ಸೆಯ ಕಾರುಬಾರೇ ಹೆಚ್ಚಾಗುತ್ತದೆ. ಕಾಂಗ್ರೆಸ್ ಸರ್ಕಾರದ ರೀತಿ-ನೀತಿಗಳೇ ಇದಕ್ಕೆ ಕಾರಣವಾಗಿದೆ. ಈ ಸರ್ಕಾರಕ್ಕೆ ಸಂಶೋಧನೆ, ಅಭಿವೃದ್ಧಿ ಯಾವುದೂ ಬೇಕಾಗಿಲ್ಲ. ಯಡಿಯೂರಪ್ಪ ಸಿಎಂ ಇರುವಾಗ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ ಮಿಸಲಿಟ್ಟ 100 ಎಕರೆ ಭೂಮಿಯಲ್ಲಿ ಈಗ ಕೇವಲ 17 ಎಕರೆ ಉಳಿದಿದೆ. ಹೀಗಿರುವಾಗ ಕಾಂಗ್ರೆಸ್ನಿಂದ ಜನಪರ ಕಾರ್ಯಗಳನ್ನು ನಿರೀಕ್ಷಿಸುವುದು ಮರೀಚಿಕೆ ಎಂದುಎಂದು ಡಿ.ಎಸ್.ಅರುಣ್ ವ್ಯಂಗ್ಯವಾಡಿದರು.