ಕನ್ನಡಪ್ರಭ ವಾರ್ತೆ ಮಂಡ್ಯ
ಹರಿಪ್ರಿಯ ಹೊಟೇಲ್ನ ಮಾಲೀಕ ಕೆ.ರಮೇಶ್ ಆಚಾರ್ (77) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಂಡ್ಯದಲ್ಲಿ ಹೊಟೇಲ್ ಉದ್ಯಮಕ್ಕೆ ಹೊಸ ಆಯಾಮ ಸೃಷ್ಠಿ ಮಾಡಿಕೊಟ್ಟ ರಮೇಶ್ ಆಚಾರ್ ಅವರು, ಹೊಟೇಲ್ ಹರಿಪ್ರಿಯ, ಹೊಟೇಲ್ ವಿಶ್ರಾಂತ್, ಹೊಟೇಲ್ ಗಾಯಿತ್ರಿ ಹೊಟೇಲ್ಗಳನ್ನು ಸ್ಥಾಪಿಸಿದ್ದರು. ಹರಿಬೆಲ್ಟ್ ಅಂಡ್ ಕನ್ವೆಯರ್ಸ್ ಕೈಗಾರಿಕೆಯನ್ನು ಪ್ರಾರಂಭಿಸಿದ್ದರು.ಮಂಡ್ಯದ ಎಲ್ಲಾ ಸಾಮಾಜಿಕ, ಧಾರ್ಮಿಕ ಕ್ರೀಡಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಚಾಮರಾಜನಗರದ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದವರಿಗೆ ವಸತಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ಗುಜರಾತ್ನ ಲಾಥೋರ್ನಲ್ಲಿನ ನಿರಾಶ್ರಿತರಿಗೆ ನೆರವು ನೀಡಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಆತ್ಮೀಯರಾಗಿದ್ದ ರಮೇಶ್ ಆಚಾರ್, ಮಂಡ್ಯದ ಬಹುತೇಕ ರಾಜಕಾರಣಿಗಳೊಂದಿಗೆ ಸ್ನೇಹಿದಿಂದಿದ್ದರು. ನಗರಸಭಾ ಸದಸ್ಯರಾಗಿ, ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಲ್ಲದೆ ಅತ್ಯುತ್ತಮ ತೆರಿಗೆದಾರ ಎಂದು ಕರ್ನಾಟಕ ಸರ್ಕಾರದ ಗೌರವಕ್ಕೆ ಪಾತ್ರರಾಗಿದ್ದರು.
ಮಾಜಿ ಸಚಿವರಾದ ಎಂ.ಎಸ್. ಆತ್ಮಾನಂದ, ಸಿ.ಎಸ್. ಪುಟ್ಟರಾಜು, ನಗರಸಭೆ ಮಾಜಿ ಅಧ್ಯಕ್ಷರಾದ ನಾಗೇಶ್, ಎಚ್.ಎಸ್. ಮಂಜು, ಬಿ.ಸಿದ್ದರಾಜು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.
ನಗರದ ಹಾಲಹಳ್ಳಿಯಲ್ಲಿರುವ ಬ್ರಾಹ್ಮಣ ರುದ್ರಭೂಮಿಯಲ್ಲಿ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಿತು.