ಸೌಹಾರ್ದತೆಯೇ ಸಮಾಜದ ಸೌಂದರ್ಯ: ಹಾರಕೂಡದ ಶ್ರೀ

| Published : Mar 13 2025, 12:48 AM IST

ಸಾರಾಂಶ

ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಹಜರತ್ ದಾವಲ್ ಮಲಿಕ್ ಸಾಹೇಬರ ದರ್ಗಾದಲ್ಲಿ ಗ್ರಾಮದ ಮುಸ್ಲಿಂ ಬಾಂಧವರಿಂದ ಏರ್ಪಡಿಸಿದ ಗುರುವಂದನೆ ಹಾಗೂ 781ನೇ ತುಲಾಭಾರ ಸೇವೆ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಸೌಹಾರ್ದತೆಯಿಂದ ಕೂಡಿದ ಸಮಾಜ ಭಾವೈಕ್ಯತೆಯ ಸೌಂದರ್ಯದಿಂದ ತುಂಬಿರುತ್ತದೆ. ಅಂತಹ ಸಮಾಜದಲ್ಲಿ ಯಾವಾಗಲೂ ಸ್ನೇಹದ ಮಾಧುರ್ಯ ಜಿನುಗುತ್ತಿರುತ್ತದೆ ಎಂದು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಹಾರಕೂಡ ಗ್ರಾಮದ ಹಜರತ್ ದಾವಲ್ ಮಲಿಕ್ ಸಾಹೇಬರ ದರ್ಗಾದಲ್ಲಿ ಗ್ರಾಮದ ಮುಸ್ಲಿಂ ಬಾಂಧವರಿಂದ ಏರ್ಪಡಿಸಿದ ಗುರುವಂದನೆ ಹಾಗೂ 781ನೇ ತುಲಾಭಾರ ಸೇವೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸದ್ಭಾವ, ಸದ್ವಿಚಾರ, ಸನ್ನಡತೆ ಮನುಷ್ಯನನ್ನು ಧರ್ಮವಂತನಾಗಿ ಮಾರ್ಪಡಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತವೆ.ಯಾವುದೇ ಧರ್ಮವಾಗಿರಲಿ ಅದರ ಮೂಲ ಧ್ಯೇಯ ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣವೇ ಆಗಿದೆ ಧರ್ಮಾಚರಣೆಗಳು ವಿಭಿನ್ನವಾದರೂ ಆಂತರ್ಯದ ತಿರುಳು ಒಂದೇ ಎನ್ನುವುದನ್ನು ಎಲ್ಲರೂ ಮನಗಾಣಬೇಕು ವಿಭಿನ್ನ ಧರ್ಮೀಯರೆಲ್ಲರೂ ಒಂದಾಗಿ ಬಾಳುವ ವಿಶಿಷ್ಟ ಪುಣ್ಯ ಭೂಮಿ ನಮ್ಮ ಭಾರತ ಭಾರತೀಯರೆಂದರೆ ಬೆಳಕಿನೆಡೆಗೆ ಚಲಿಸುವ ಪಥಿಕರು.ಪವಿತ್ರ ರಂಜಾನ ತಿಂಗಳಿನಲ್ಲಿ ಹಾರಕೂಡ ಗ್ರಾಮದ ಮುಸ್ಲಿಂ ಬಾಂಧವರು ಹಜರತ್ ದಾವಲ್ ಮಲಿಕ್ ಸಾಹೇಬರ ದರ್ಗಾದಲ್ಲಿ ಆಯೋಜಿಸಿದ ಗುರುವಂದನೆ ‘ಸಬ್ಕಾ ಮಾಲಿಕ ಏಕ ಹೈ’ ಎನ್ನುವ ಅದ್ಭುತ ಸಂದೇಶ ಸಾರುವುದರೊಂದಿಗೆ ಹೊರ ಜಗತ್ತಿಗೆ ಭಾವೈಕ್ಯತೆಯ ನಿಜರೂಪ ತಿಳಿಸಿಕೊಟ್ಟಿರುವುದು ಶ್ಲಾಘನೀಯ ವಾಗಿದೆ.ಮಾಜಿ ಎಂಎಲ್ಸಿ ವಿಜಯ ಸಿಂಗ್ ಮಾತನಾಡಿದರು. ಚೆನ್ನಪ್ಪ ಹೊಳ್ಕರ್, ಮಾಜಿ ಎಪಿಎಂಸಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಮಲ್ಲಿನಾಥ ಹಿರೇಮಠ ಹಾರಕೂಡ, ಖಾಜಾಸಾಬ ಮುಲ್ಲಾ, ಹಾರಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾತಿ ಮೂಲಗೆ, ಪಿಡಿಓ ಜ್ಯೋತಿ ಕೋಡಿಮಠ, ಡಿ.ಕೆ.ದಾವೂದ್, ರವೀಂದ್ರ ಭುರಾಳೆ, ಮಾಜಿ ಜಿ.ಪಂ ಸದಸ್ಯರಾದ ಆನಂದ ಪಾಟೀಲ, ಎಸ್ ಡಿಎಂಸಿ. ಅಧ್ಯಕ್ಷ ಮಹಾದೇವ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಾಲಾಜಿ ಬಿರಾದಾರ, ಸಿದ್ರಾಮ ಹೆಗಡೆ, ಗನಿಸಾಬ್ ಪಿಂಜಾರ, ಅಕ್ಬರ್ ಪಠಣ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮೊದಲು ಹಾರಕೂಡ ಮಠದಿಂದ ಹಜರತ್ ದಾವಲ್ ಮಲಿಕ್ ಸಾಹೇಬರ ದರ್ಗಾದವರಿಗೆ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಪೂಜ್ಯರ ಅದ್ಧೂರಿ ಮೆರವಣಿಗೆ ಜರುಗಿತು.