ಅಂಗವಿಕಲರ ಆರೋಗ್ಯ, ವಿಮಾ ಯೋಜನೆಗಳು ‌ಅರ್ಹರಿಗೆ ತಲುಪಲಿ

| Published : Mar 15 2025, 01:02 AM IST

ಅಂಗವಿಕಲರ ಆರೋಗ್ಯ, ವಿಮಾ ಯೋಜನೆಗಳು ‌ಅರ್ಹರಿಗೆ ತಲುಪಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆ ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿವೆ.

ಪರಿಷತ್‌ನಲ್ಲಿ ಸದಸ್ಯ ವೈ.ಎಂ. ಸತೀಶ್ ಧ್ವನಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆ ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಕರ್ನಾಟಕದಲ್ಲಿ ಅಂಗವಿಕಲರಿಗೆ ಸರ್ಕಾರ ನೀಡುವ ಆರೋಗ್ಯ ಮತ್ತು ವಿಮಾ ಯೋಜನೆಗಳ ಕುರಿತು ವಿಧಾನಸೌಧದ ಮೇಲ್ಮನೆಯಲ್ಲಿ ಶುಕ್ರವಾರ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಅಂಗವಿಕಲತೆ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಅಡಿ ಶಸ್ತ್ರಚಿಕಿತ್ಸೆಯಿಂದ ವಿಕಲಚೇತನತೆ ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ₹1 ಲಕ್ಷ ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆ ಕಳೆದ 25 ವರ್ಷಗಳ ಹಿಂದಿನಿಂದಲೂ ಜಾರಿಯಲ್ಲಿದೆ ಎಂದರು.

ನಾಲ್ಕು ಬಗೆಯ ವಿಕಲಚೇತನರಿಗೆ ನಿರಾಮಯ ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದ್ದು, ನಮ್ಮ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 4 ಬಗೆಯ ವಿಕಲಚೇತನರಿಗೆ ಒಂದು ಬಾರಿ ವಾರ್ಷಿಕ ₹250ಗಳನ್ನು ಸರ್ಕಾರ ವಿಮಾಕಂತು ಪಾವತಿಸುತ್ತಿದೆ. ಪ್ರತಿ ವರ್ಷ ₹1 ಲಕ್ಷಗಳ ವರೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಸಿಗಲಿದೆ. ಈ ಮೊತ್ತದಲ್ಲಿ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆರಹಿತ ಕಾಯಿಲೆಗಳ ವೆಚ್ಚ, ಹೊರರೋಗಿ ವಿಭಾಗದ ವೆಚ್ಚ, ಆರೋಗ್ಯ ತಪಾಸಣೆ ಪರೀಕ್ಷೆಗಳು, ಔಷಧಿಗಳು, ಹಲ್ಲುಗಳಿಗೆ ಸಂಬಂಧಿಸಿದ ವೆಚ್ಚ, ಚಾಲ್ತಿಯಲ್ಲಿರುವ ಥೆರಪಿ, ಪರ್ಯಾಯ ಔಷಧಿಗಳು, ಪ್ರಯಾಣ ವೆಚ್ಚಗಳನ್ನು ಒಳಗೊಂಡಿರುತ್ತದೆ. ಬಡತನ ರೇಖೆಗಿಂತ ಮೇಲ್ಪಟ್ಟ ಕುಟುಂಬದ ಅಂಗವಿಕಲ ವ್ಯಕ್ತಿಗಳು ವಾರ್ಷಿಕ ₹500ಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ ಗುರುತು ಹಚ್ಚಿದ ತೀವ್ರತರವಾದ ಅಥವಾ ಗಂಭೀರ ಸ್ವರೂಪದ ಶ್ರವಣದೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನೆಗಳನ್ನು ನೀಡಿ ಟ್ರಯಲ್ ಆಡಿಟರಿ ವರ್ಬಲ್ ಥೆರಪಿ ಒದಗಿಸಲಾಗುವುದು.

ಶ್ರವಣದೋಷವುಳ್ಳವರಿಗೆ ಸಾಧನಗಳಿಂದ ಸರಿಪಡಿಸಲಾಗದಿದ್ದಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಿ, ಶಸ್ತ್ರಚಿಕಿತ್ಸೆಯ ನಂತರದ 2 ಆಡಿಟರಿವರ್ಬಲ್ ಥೆರಪಿ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 2016-17ನೇ ಸಾಲಿನಿಂದ ಇಲ್ಲಿಯವರೆಗೆ 665 ಫಲಾನುಭವಿಗಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.

ದೇಶದಲ್ಲೇ ಪ್ರಥಮ ಬಾರಿಗೆ ಅಂಗವಿಕಲ ಮಕ್ಕಳ ಪೋಷಕರಿಗೆ ತಲಾ ₹1 ಸಾವಿರ ಗೌರವಧನವನ್ನು ರಾಜ್ಯ ಸರ್ಕಾರ ಪಾವತಿಸುತ್ತಿರುವುದು ಶ್ಲಾಘನೀಯ. ಈ ಮೊತ್ತವನ್ನು ಹೆಚ್ಚಿಸಬೇಕು. ವಿಮಾ ಸೌಲಭ್ಯವು ₹1 ಲಕ್ಷಗಳಿಂದ ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ವೈ.ಎಂ‌. ಸತೀಶ್ ಸದನದಲ್ಲಿ ಮನವಿ ಮಾಡಿದರು.