ಅಮಾಯಕರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವ ನಕಲಿ ವೈದ್ಯರುವಸಂತಕುಮಾರ್ ಕತಗಾಲ ಕನ್ನಡಪ್ರಭ ವಾರ್ತೆ ಕಾರವಾರನಕಲಿ ಕ್ಲಿನಿಕ್ ಹಾಗೂ ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಮುಗಿಬಿದ್ದಿದೆ. ಜಿಲ್ಲೆಯಾದ್ಯಂತ ನಕಲಿ ಕ್ಲಿನಿಕ್, ವೈದ್ಯರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದೆ. ಈಚೆಗೆ ಮುಂಡಗೋಡದಲ್ಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರೆ, ಸೋಮವಾರ ಭಟ್ಕಳದಲ್ಲಿ ಮೂರು ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸರಿಯಾದ ದಾಖಲೆ, ಪ್ರಮಾಣ ಪತ್ರಗಳು ಇಲ್ಲದೆ ಇರುವುದು ಗೊತ್ತಾಗುತ್ತಿದ್ದಂತೆ ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲೂ ನಕಲಿ ಕ್ಲಿನಿಕ್ ಹಾಗೂ ವೈದ್ಯರ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಜಿಲ್ಲೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಘಟಕಗಳಲ್ಲಿ ವೈದ್ಯರ ಕೊರತೆ ಇದೆ. ಕೆಲವೆಡೆ ಒಬ್ಬ ವೈದ್ಯರು ಎರಡು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ವೈದ್ಯರ ಕೊರತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ನಕಲಿ ವೈದ್ಯರು ಕ್ಲಿನಿಕ್ ತೆರೆದು ರೋಗಿಗಳ ಜೀವದ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ. ಯಾವುದೇ ಅಧಿಕೃತ ವೈದ್ಯಕೀಯ ಕೋರ್ಸ್ ಮಾಡದೆ ರೋಗಿಗಳಿಗೆ ಔಷಧಿ ನೀಡುವುದು, ಚುಚ್ಚುಮದ್ದು ನೀಡುವುದು ಸೇರಿದಂತೆ ಪಕ್ಕಾ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಅಮಾಯಕ ಜನತೆ ಇದರ ಅರಿವಿಲ್ಲದೆ ಈ ನಕಲಿ ವೈದ್ಯರತ್ತ ಎಡತಾಕುತ್ತಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರಗಳಲ್ಲಿ ವೈದ್ಯರ ಕೊರತೆ ಇರುವುದೂ ನಕಲಿ ಕ್ಲಿನಿಕ್ ಹಾವಳಿಗೆ ಮುಖ್ಯ ಕಾರಣವಾಗಿದೆ. ಮುಖ್ಯ ವೈದ್ಯಾಧಿಕಾರಿ ಹುದ್ದೆ 39 ಮಂಜೂರಾತಿ ಇದ್ದು, ಕೇವಲ 6 ವೈದ್ಯರು ಇದ್ದಾರೆ. 105 ತಜ್ಞ ವೈದ್ಯರ ಹುದ್ದೆ ಮಂಜೂರಾತಿ ಇದ್ದರೆ, 70 ವೈದ್ಯರು ಸೇವೆಯಲ್ಲಿದ್ದಾರೆ. ಹಿರಿಯ ವೈದ್ಯಾಧಿಕಾರಿಗಳು 3 ಇರಬೇಕಾದಲ್ಲಿ ಕೇವಲ ಒಬ್ಬರು ಇದ್ದಾರೆ. ಜನರಲ್ ವೈದ್ಯರ ಹುದ್ದೆ 83 ಇದ್ದು, ಈಗ ಇರುವವರ ಸಂಖ್ಯೆ 72. ನಕಲಿ ಕ್ಲಿನಿಕ್ ಹಾಗೂ ನಕಲಿ ವೈದ್ಯರ ಮೇಲೆ ದಾಳಿ ಮುಂದುವರಿಯಲಿದೆ. ಈಗಾಗಲೇ ಎರಡು ತಾಲೂಕುಗಳಲ್ಲಿ ನಡೆದಿದೆ. ನಕಲಿ ಕ್ಲಿನಿಕ್ ಹಾಗೂ ವೈದ್ಯರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಡಿಎಚ್‌ಒ ಶಂಕರ ರಾವ್.