ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ. ರೋಗ ಬಂದ ಮೇಲೆ ಎಚ್ಚರಿಕೆ ವಹಿಸುವುದಕ್ಕಿಂತ ಬರುವ ಮುನ್ನವೇ ಜಾಗ್ರತೆ ವಹಿಸುವುದು ಅವಶ್ಯ ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಶ್ರೀಪತಿ ಭಾರಧ್ವಾಜ್ ಹೇಳಿದರು.ನಗರದ ಬಂದೀಗೌಡ ಬಡಾವಣೆಯ ಗಾಯಿತ್ರಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ, ಅವಿಜ್ಞಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯದಿಂದ ಇದ್ದರೆ ಮನುಷ್ಯ ಏನು ಬೇಕಾದರೂ ಸಾಧನೆ ಮಾಡಬಹುದು. ಹಣ ಸಂಪಾದನೆ ಮಾಡಬಹುದು. ಆರೋಗ್ಯ ಸಂಪಾದನೆ ಮಾಡುವುದು ತುಂಬಾ ಕಷ್ಟ. ಉಳ್ಳವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ, ಸಾಮಾನ್ಯ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ. ಆದ್ದರಿಂದ ಇಂತಹ ಶಿಬಿರಗಳಲ್ಲಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆಯಲಿ ಎಂದು ಆಯೋಜಿಸಿರುವುದಾಗಿ ಹೇಳಿದರು.ಶಿಬಿರದಲ್ಲಿ ಬಿಪಿ, ಶುಗರ್, ಎತ್ತರ, ತೂಕ, ಇಸಿಜಿ, ಪಿಎಫ್ಟಿ, ಕಣ್ಣಿನ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಂಬಧಿತ ಸಮಸ್ಯೆಗಳ ತಪಾಸಣೆ ಮಾಡಲಾಯಿತು.ಅಗತ್ಯ ಇರುವವರಿಗೆ ನಾರಾಯಣ ಹೃದಯಾಲಯದ ನುರಿತ ವೈದ್ಯರು ಸಲಹೆ ಮತ್ತು ಸಮಾಲೋಚನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಾಲಾಜಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ರಮೇಶ್, ಉಮಾ, ಸತ್ಯ, ಬಾಲಕೃಷ್ಣ ಸೇರಿದಂತೆ ಇತರರಿದ್ದರು.ಇಂದು ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆಮಂಡ್ಯ:ತಾಲೂಕಿನ ಕೆರೆಗೋಡು ಎಜುಕೇಶನ್ ಸೊಸೈಟಿ (ರಿ) ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 27 ರಂದು ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ತಾಲೂಕು ಆಡಳಿತ, ತಾಪಂ ಹಾಗೂ ಆದಿಚುಂಚನಗಿರಿ ಆಸ್ಪತ್ರೆ, ಬಿ.ಜಿ.ನಗರ, ನಾಗಮಂಗಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ, ಮಿಮ್ಸ್, ಕಿದ್ವಾಯಿ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ತಜ್ಞ ವೈದ್ಯಾಧಿಕಾರಿಗಳ ತಂಡದಿಂದ ಉಚಿತ ವಿಶೇಷ ಆರೋಗ್ಯ ತಪಾಸಣೆ ನಡೆಯಲಿದೆ.ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರ ಸಮ್ಮುಖದಲ್ಲಿ ಶಾಸಕ ಪಿ.ರವಿಕುಮಾರ್ ಶಿಬಿರಕ್ಕೆ ಚಾಲನೆ ನೀಡುವರು. ಡೀಸಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಶೋಭರಾಣಿ, ಎಡಿಸಿ ಬಿ.ಸಿ ಶಿವಾನಂದಮೂರ್ತಿ, ಮಿಮ್ಸ್ ನಿರ್ದೇಶಕ ನರಸಿಂಹಮೂರ್ತಿ, ನಾಗಮಂಗಲ ಆದಿಚುಂಚನಗಿರಿ ಆಸ್ಪತ್ರೆ ಅಧೀಕ್ಷಕ ಡಾ. ಕೆ.ಎಂ.ಶಿವಕುಮಾರ್, ಡಿಎಚ್ ಒ ಡಾ.ಬೆಟ್ಟಸ್ವಾಮಿ, ಎಸಿ ಶಿವಮೂರ್ತಿ ಎಂ., ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಮುಖ್ಯಸ್ಥರು ಹಾಗೂ ಕ್ಯಾನ್ಸರ್ ತಜ್ಞೆ ಡಾ.ಶೋಭಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕೆರೆಗೋಡು ಎಜುಕೇಶನ್ ಸೊಸೈಟಿ ಅಧ್ಯಕ್ಷ ವಸಂತರಾಜು, ಕಾರ್ಯದರ್ಶಿಗಳಾದ ಜಿ. ರಾಮಲಿಂಗೇಗೌಡ ಆಗಮಿಸಲಿದ್ದಾರೆ.