ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರದ ಪ್ರಥಮ ಹಂತದ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಜಿ ಸ್ಪೀಕರ್‌ ಯು.ಟಿ.ಖಾದರ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಲಾಗಿದೆ. ಹಿಂದೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಖಾದರ್‌ ಇದೇ ಖಾತೆಯನ್ನು ಹೊಂದಿದ್ದರು.

ವಾಸ್ತವದಲ್ಲಿ ಯು.ಟಿ.ಖಾದರ್‌ ಹೆಸರು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತು. ಹಾಲಿ ಸರ್ಕಾರದಲ್ಲಿ ಎರಡಕ್ಕಿಂತ ಜಾಸ್ತಿ ಉಪ ಮುಖ್ಯಮಂತ್ರಿ ಹುದ್ದೆ ಇದ್ದರೆ ಅದರಲ್ಲಿ ಒಂದು ಖಾದರ್‌ ಪಾಲಾಗಬಹುದು ಎಂದು ಬೆಂಬಲಿಗರು ನಿರೀಕ್ಷಿಸಿದ್ದರು. ಮಾತ್ರವಲ್ಲ ಹಿರಿಯ, ಅನುಭವಿ ಕಾಂಗ್ರೆಸಿಗ ಆಗಿರುವುದರಿಂದ ಖಾದರ್‌ಗೆ ಗೃಹ ಅಥವಾ ಬೃಹತ್‌ ಕೈಗಾರಿಕೆ ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯ ಹೊಣೆ ನೀಡುವ ಬಗ್ಗೆ ಪಕ್ಷ ನಾಯಕರಲ್ಲಿ ಪ್ರಸ್ತಾಪಗೊಂಡಿತ್ತು. ಅಂತಿಮ ಕ್ಷಣದಲ್ಲಿ ಖಾದರ್‌ ಹಿಂದಿನ ಆರೋಗ್ಯ ಖಾತೆಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಪ್ರಮುಖ ಖಾತೆಗೆ ಲಾಬಿ ನಡೆಸುವುದಿಲ್ಲ, ಕೊಟ್ಟ ಖಾತೆಯನ್ನು ಸ್ವೀಕರಿಸುವುದಾಗಿ ಖಾದರ್‌ ಈ ಮೊದಲೇ ಹೇಳಿಕೆ ನೀಡಿದ್ದರು. ಆದರೆ ಅವರ ಪರವಾಗಿ ಪ್ರಮುಖ ಖಾತೆಗೆ ಲಾಬಿ ನಡೆಸಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗಿದೆ.

ಉಡುಪಿ ಉಸ್ತುವಾರಿಗೆ ಆಸಕ್ತಿ:

ಸಚಿವರಾದ ಯು.ಟಿ.ಖಾದರ್‌ಗೆ ದ.ಕ. ಜಿಲ್ಲೆಗಿಂತ ಉಡುಪಿ ಜಿಲ್ಲೆಯ ಉಸ್ತುವಾರಿಗೆ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಸಿಎಂ ಡಿಕೆಶಿ ಬಳಿ ಖಾದರ್‌ ಹೇಳಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಖಾದರ್‌ ದ.ಕ. ಜಿಲ್ಲೆಯವರೇ ಆಗಿರುವುದರಿಂದ ಅವರಿಗೆ ಹೇಗೂ ದ.ಕ. ಜಿಲ್ಲೆಯ ಉಸ್ತುವಾರಿ ನೀಡುವುದು ಸಹಜ. ಆದರೂ ಸಚಿವರೇ ಇಲ್ಲದ ಉಡುಪಿ ಜಿಲ್ಲೆಯ ಉಸ್ತುವಾರಿಗೂ ಖಾದರ್‌ ಆಸಕ್ತಿ ಹೊಂದಿದ್ದು, ಸದ್ಯ ಎರಡೂ ಜಿಲ್ಲೆಯ ಉಸ್ತುವಾರಿ ಲಭಿಸಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಮೂಲ. ಈ ಹಿಂದೆ ಖಾದರ್‌ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಸಿಎಂ ಸಿದ್ದರಾಮಯ್ಯರ ಸರ್ಕಾರದ ಮೊದಲ ಅವಧಿಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಕಾರಣ ದಿನೇಶ್‌ ಗುಂಡೂರಾವ್‌ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿ ಸಚಿವರಾಗಿದ್ದರು.

ದ.ಕ. ಜಿಲ್ಲೆಯಲ್ಲಿ ಇಲ್ಲಿವರೆಗೆ ರಮಾನಾಥ ರೈ, ನಾಗರಾಜ ಶೆಟ್ಟಿ, ಜಬ್ಬಾರ್‌ಖಾನ್‌ ಹೊನ್ನಾಳಿ, ಸಿ.ಟಿ.ರವಿ, ಕೃಷ್ಣ ಪಾಲೇಮಾರ್, ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ ಸಚಿವರಾಗಿದ್ದರು.