ಸಾರಾಂಶ
ಊರುಗುಪ್ಪೆ ಪೈಸಾರಿಯ ನಿವಾಸಿ ಮಹಮ್ಮದ್ ಎಂಬವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಮನೆ ಭಾಗಶಃ ಜಖಂ ಆಗಿದೆ. ಮನೆ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಗುಪ್ಪೆ ಪೈಸಾರಿಯ ನಿವಾಸಿ ಮಹಮ್ಮದ್ ಎಂಬುವವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಮನೆಯು ಭಾಗಶಃ ಜಖಂ ಆಗಿ ಮನೆಯ ಮಂದಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಹಾಗೂ ಕಾರು ಹಾನಿಗೀಡಾಗಿರುವ ಘಟನೆ ವರದಿಯಾಗಿದೆ.ಮನೆಯ ಸಮೀಪದ ತೋಟವೊಂದರ ದೊಡ್ಡಗಾತ್ರದ ಮರವು ಭಾರಿ ಗಾಳಿ ಮಳೆಗೆ ಸೋಮವಾರ ಬೆಳಗ್ಗೆ 9 ಗಂಟೆಯ ಸಂದರ್ಭ ಅಚನಕ್ಕಾಗಿ ಮನೆಯ ಮೇಲ್ಚಾವಣಿಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಮಹಮದ್ ಎಂಬುವವರ ಪತ್ನಿ ಪಾತುಉಮ್ಮ ಹಾಗೂ ಪುತ್ರನ ಪತ್ನಿ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರು ಸಹಿತ ಜಖಂಗೊಂಡಿದೆ. ಇದರಿಂದ ಅಂದಾಜು 10 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ಮಹಮದ್ ಅವರು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಾರೆ. ಪತ್ನಿ ಪಾತುಉಮ್ಮ ಹಾಗೂ ಪುತ್ರ ಪತ್ನಿ ಸಾನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಘಟನೆಯ ಸ್ಥಳಕ್ಕೆ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್ಗೌಡ, ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ನಾಡಕಚೇರಿಯ ಪ್ರಭಾರ ಉಪತಹಸೀಲ್ದಾರ್ ಪ್ರಶಾಂತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಪ್, ಅಭಿವೃದ್ಧಿ ಅಧಿಕಾರಿ ನಂದೀಶ್ ಪೊಲೀಸ್ ಇಲಾಖೆಯವರು ಮತ್ತಿತರರು ಭೇಟಿ ನೀಡಿದರು. ಹೊರೂರು ಗ್ರಾಮದ ನಿವಾಸಿ ದೇವಿಪ್ರಸಾದ್ ಕಾಯರ್ಮಾರ್ ಅವರ ದನದ ಕೊಟ್ಟಿಗೆಯು ಭಾರಿ ಮಳೆ ಗಾಳಿಗೆ ಕೊಟ್ಟಿಗೆಯ ಮೇಲ್ಛಾವಣಿ ಮೇಲೆ ತೋಟದ ಮರ ಬಿದ್ದ ಪರಿಣಾಮ ಭಾಗಶಃ ಹಾನಿಗೀಡಾಗಿದ್ದು, ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಆಶಾ ಭೇಟಿ ನೀಡಿ ಪರಿಶೀಲಿಸಿದರು.