ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಅವಧಿಗೂ ಮುನ್ನ ಆರಂಭವಾಗಿರುವ ಮುಂಗಾರು ಮಳೆಯಿಂದಾಗಿ ಮಲೆನಾಡು ತತ್ತರಗೊಂಡಿದೆ.ಮೇ ಎರಡನೇ ವಾರದಲ್ಲಿ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ತಾಲೂಕಿನಲ್ಲೂ ಅಲ್ಪ ಪ್ರಮಾಣದ ಮಳೆ ಆರಂಭವಾಗಿದ್ದು, ಎರಡು ದಿನ ಮಾತ್ರ ಮಳೆ ಮುಂದುವರಿಯಲಿದೆ, ನಂತರ ಬಿಡುವು ನೀಡಲಿದೆ ಎನ್ನಲಾಗುತಿತ್ತು. ಆದರೆ, ಕಳೆದ ಎರಡು ದಿನಗಳಿಂದ ಅರಬ್ಬೀ ಸಮುದ್ರದ ವಾಯುಭಾರ ಕುಸಿತದ ಪರಿಣಾಮ ತಾಲೂಕಿನಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದ್ದು, ಅತಿಯಾದ ಥಂಡಿ ವಾತವಾರಣ ಆಷಾಢ ನೆನಪಿಸುತ್ತಿದೆ.
ಸಿದ್ಧತೆಗೆ ಪೆಟ್ಟು:ತಾಲೂಕಿನಲ್ಲಿ ಮುಂಗಾರು ಮಳೆ ಮುನ್ನ ಮಲೆನಾಡಿಗರು ಸಾಕಷ್ಟು ಸಿದ್ಧತೆಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ಜೂನ್ ಎರಡನೇ ವಾರದ ನಂತರ ಮುಂಗಾರು ಚುರುಕು ಪಡೆಯುವುದು ವಾಡಿಕೆ. ಆದರೆ, ಈ ಬಾರಿ ಆರಂಭದಿಂದಲೂ ಉತ್ತಮ ಮಳೆಯಾಗುತ್ತಿದ್ದು ಅನಿರೀಕ್ಷಿತವಾಗಿ ಆರಂಭವಾದ ವಾಯುಭಾರ ಕುಸಿತ ಮಳೆಗಾಲದ ನೆನಪು ಸೃಷ್ಟಿಸಿದೆ. ಇದರೊಂದಿಗೆ ಮೇ ೨೮ರಿಂದ ಮುಂಗಾರು ಆರಂಭಗೊಳ್ಳಲಿದೆ ಎಂಬ ಹವಾಮಾನ ಇಲಾಖೆಯ ವರದಿ ಮಲೆನಾಡಿಗರ ಜಂಗಾಬಲವನ್ನೆ ಉಡುಗಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಕಾಫಿ, ಭತ್ತದ ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು, ಸೌದೆ ಸಂಗ್ರಹದಂತಹ ಹಲವು ಕೆಲಸಗಳನ್ನು ಮಲೆನಾಡಿಗರು ಚಾಚುತಪ್ಪದೆ ಮಾಡಬೇಕಿದೆ. ಆದರೆ, ಮುಂಗಾರು ಆರಂಭಕ್ಕೂ ಸಮಯವಿದೆ ಎಂದು ನಂಬಿದ್ದ ಜನರು ಈ ಎಲ್ಲ ಕೆಲಸಗಳನ್ನು ಬಾಕಿ ಇಟ್ಟಿದ್ದರು. ಆದರೆ, ಅವಧಿಗೂ ಮುನ್ನ ಮುಂಗಾರು ಆರಂಭವಾಗಿರುವುದು ಈ ಯಾವುದೇ ಕೆಲಸ ಮುಗಿಸಲು ಅವಕಾಶವನ್ನೇ ನೀಡುತ್ತಿಲ್ಲ. ಸದ್ಯ ಗಾಳಿಮಳೆಯಿಂದಾಗಿ ಕಾಫಿತೋಟಗಳ ಕೆಲಸಗಳಿಗೆ ರಜೆ ನೀಡಲಾಗಿದ್ದರೆ, ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಹಲವೆಡೆ ಅವಾಂತರ:
ಕಳೆದ ಎರಡು ದಿನಗಳ ಗಾಳಿ ಮಳೆಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮರಗಳು ಧರೆಗುರುಳಿದ್ದು ಅವಾಂತರ ಸೃಷ್ಟಿಸಿದ್ದರೆ, ಬಾಳೆ,ಅಡಿಕೆ, ಸಿಲ್ವರ್ ಮರಗಳು ಸಾಕಷ್ಟು ಪ್ರಮಾಣದಲ್ಲಿ ನೆಲಕ್ಕೆ ಬಾಗಿ ಸಾಕಷ್ಟು ನಷ್ಟ ಉಂಟುಮಾಡಿದೆ. ಸುಮಾರು ೧೬೦ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು ಹಾನುಬಾಳ್, ಹೆತ್ತೂರು ಹೋಬಳಿಯ ಸುಮಾರು ೯೦ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದ್ದು, ಕತ್ತಲಲ್ಲೇ ದಿನಕಳೆಯುವಂತಾಗಿದೆ. ಹೇಮಾವತಿ ಸೇರಿದಂತೆ ತಾಲೂಕಿನ ಪ್ರಮುಖ ನದಿಗಳೆಲ್ಲ ಮೈದುಂಬಿ ಹರಿಯುತ್ತಿವೆ. ತಾಲೂಕಿನಲ್ಲಿ ಮೇ ೧೫ರವರಗೆ ೧೬೦ ಮೀ.ಮೀಟರ್ ಮಳೆಯಾಗಬೇಕಿದ್ದರೆ ೧೬೩ ಮೀ. ಮೀಟರ್ ಸರಾಸರಿ ಮಳೆಯಾಗಿತ್ತು. ನಂತರದ ಹತ್ತು ದಿನಗಳಲ್ಲಿ ಅಂದರೆ ಮೇ ೨೫ರ ವೇಳೆಗೆ ೬೦೦ ಮೀ.ಮೀಟರ್ ಮಳೆಯಾಗಿದ್ದು ವಾಡಿಕೆ ಮಳೆ ೧೯೦ ಮೀ.ಮೀಟರ್ ಆಗಬೇಕಿದ್ದು, ಶೇ. ೪೦ರಷ್ಟು ಅಧಿಕ ಮಳೆಯಾಗಿದೆ.