ಕಾರ್ಕಳ: ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಸುರಿಯಿತು. ದಿನಪೂರ್ತಿ ಉರಿ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಮಳೆ ಸ್ವಲ್ಪ ತಂಪು ನೀಡಿದರೂ, ಸಿಡಿಲು-ಮಿಂಚು ಹಾಗೂ ಗುಡುಗು ಗಾಳಿಯ ತೀವ್ರತೆ ಆತಂಕ ಮೂಡಿಸಿತು.

ಹೆಬ್ರಿ ತಾಲೂಕಿನ ಅಂಡಾರು, ಮುನಿಯಾಲು ಪ್ರದೇಶಗಳ ಜೊತೆಗೆ ಕಾರ್ಕಳ ತಾಲೂಕಿನ ಶಿರ್ಲಾಲು, ಮರ್ಣೆ, ಕಡ್ತಲ, ಎಣ್ಣೆಹೊಳೆ, ಹೆರ್ಮುಂಡೆ ಹಾಗೂ ಕೆರುವಾಶೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕೆಲವೆಡೆ ಗಾಳಿ ಬಿರುಗಾಳಿಯಂತೆ ಬೀಸಿದ ಪರಿಣಾಮ ಮರಗಳ ಕೊಂಬೆಗಳು ಮುರಿದು ರಸ್ತೆ ಮೇಲೆ ಬಿದ್ದಿರುವ ಘಟನೆ ವರದಿಯಾಗಿವೆ.ಸಿಡಿಲಿನ ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕತ್ತಲಿನಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲಾಖೆ ಸಿಬ್ಬಂದಿ ಸಂಪರ್ಕ ಜೋಡಣೆ ಕಾರ್ಯದಲ್ಲಿ ತೊಡಗಿದ್ದಾರೆ.