ಕುರುಗೋಡಿನಲ್ಲಿ ಭಾರೀ ಮಳೆ: ಈರುಳ್ಳಿ ಬೆಳೆಗೆ ಹಾನಿ

| Published : Oct 30 2025, 02:30 AM IST

ಸಾರಾಂಶ

ಸಿರಿಗೇರಿ ಗ್ರಾಮದ ಸುಗ್ನಳ್ಳಿ ರುದ್ರಪ್ಪ, ಲಿಂಗಪ್ಪ, ಪ್ರಕಾಶ ಅವರು ೧೫ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಮಳೆಗೆ ಹಾನಿಯಾಗಿದೆ.

ಕುರುಗೋಡು: ತಾಲೂಕಿನ ದಮ್ಮೂರು ಗ್ರಾಮದ ಹುಲಿಗೆಮ್ಮ, ಫಕ್ಕೀರಮ್ಮ, ಉಪ್ಪಾರಳ್ಳಿಯ ಹೊನ್ನೂರಪ್ಪ, ಸಿರಿಗೇರಿ ಗ್ರಾಮದ ಸುಗ್ನಳ್ಳಿ ರುದ್ರಪ್ಪ, ಲಿಂಗಪ್ಪ, ಪ್ರಕಾಶ ಅವರು ೧೫ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಮಳೆಗೆ ಹಾನಿಯಾಗಿದೆ.

ಕಳೆದ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಲ್ಲಿ ಬೆಳೆ ಕೊಚ್ಚಿ ಹೋಗಿದೆ. ಕಟಾವು ಮಾಡಿದ ಈರುಳ್ಳಿಯನ್ನು ಚೀಲಗಳಿಗೆ ತುಂಬಿ ಮಾರಾಟ ಮಾಡಬೇಕು ಎನ್ನುವ ಸಂದರ್ಭದಲ್ಲಿ ನಿರಂತರವಾಗಿ ಸುರಿದ ಮಳೆ ಅವರ ಲಾಭದ ನಿರೀಕ್ಷೆಗೆ ತಣ್ಣೀರೆರಚಿದೆ. ಮಳೆಯಲ್ಲಿ ತೋಯ್ದು ನಷ್ಟವಾಗಿರುವುದು ಒಂದಾದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ರೈತರ ಗಾಯದ ಮೇಲೆ ಬಲೆ ಎಳೆದಂತಾಗಿದೆ.

ಈರುಳ್ಳಿ ಮಳೆಯಲ್ಲಿ ತೋಯ್ದ ಪರಿಣಾಮ ಜಮೀನುಗಳಲ್ಲಿಯೇ ಮೊಳಕೆ ಒಡೆಯಲಾರಂಭಿಸಿದೆ. ಮಾರುಕಟ್ಟೆಯಲ್ಲಿ ಕೆಜಿಗೆ ೧೦ ರು. ಬೆಲೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಲ್ಲಿ ತೋಯ್ದ ಈರುಳ್ಳಿಯನ್ನು ಚೀಲಗಳಿಗೆ ತುಂಬಿಸಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾದರೆ ಕಾರ್ಮಿಕರ ಕೂಲಿ ಮತ್ತು ಸಾಗಾಟ ವೆಚ್ಚ ಕೂಡ ದೊರೆಯುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತಾಶರಾದ ರೈತರು ಈರುಳ್ಳಿಯನ್ನು ಜಮೀನುಗಳಲ್ಲಿಯೇ ಬಿಟ್ಟು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಮೆಣಸಿನಕಾಯಿ ಬೆಳೆದು ಜೇಬು ತುಂಬಿಸಿಕೊಂಡಿದ್ದೆವು. ನಾಲ್ಕು ಎಕರೆಯಲ್ಲಿ ಬೆಳೆದ ಈರುಳ್ಳಿ ಜಮೀನಿನಲ್ಲಿಯೇ ಮೊಳಕೆ ಬಂದು ಸಂಪೂರ್ಣ ನಾಶವಾಗಿದೆ. ಈ ವರ್ಷ ಈರುಳ್ಳಿ ಬೆಳೆದು ಜೇಬು ಖಾಲಿ ಮಾಡಿಕೊಂಡಿದ್ದೇವೆ ಎಂದು ರೈತರಾದ ಸುಗ್ನಳ್ಳಿ ರುದ್ರಪ್ಪ, ಲಿಂಗಪ್ಪ ಮತ್ತು ಪ್ರಕಾಶ್ ಅಳಲು ತೋಡಿಕೊಂಡರು.

ಜಿಲ್ಲಾಡಳಿತ ಕೂಡಲೇ ಈರುಳ್ಳಿ ಬೆಳೆದ ರೈತರಿಗೆ ಪರಿಹಾರನೀಡಬೇಕು ಎಂದು ಅವರು ಒತ್ತಾಯಿಸಿದರು.

ಕುರುಗೋಡು 03 ಸಿರಿಗೇರಿ ಗ್ರಾಮದಲ್ಲಿ ಈರುಳ್ಳಿ ಮಳೆಯಲ್ಲಿ ತೋಯ್ದು ನಷ್ಟವಾಗಿರುವುದು.