ನವಲಗುಂದ: ಪಟ್ಟಣವೂ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಗಾಳಿಯಿಂದ ಕೂಡಿದ ಮಳೆ ಸುರಿದು ಹಲವಾರು ಮರಗಳು ನೆಲಕ್ಕುರುಳಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಭಾರೀ ಗಾಳಿಯಿಂದ ಕೂಡಿದ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ತಾಲೂಕಿನಾದ್ಯಂತ ಸತತ 4 ಗಂಟೆಗೂ ಹೆಚ್ಚುಕಾಲ ವಿದ್ಯುತ್ ವ್ಯತ್ಯಯವಾಗಿದೆ. ಪಟ್ಟಣದ ಹೊರವಲಯದಲ್ಲಿನ ಅಂಬಲಿ ಹಳ್ಳದ ಕೆಳಮಟ್ಟದ ಸೇತುವೆ ಮುಳುಗಿದ್ದರಿಂದ ಇಬ್ರಾಹಿಂಪುರ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಹಳ್ಳದ ಪಕ್ಕದಲ್ಲಿಯೇ 2 ಗಂಟೆ ನಿಂತಿತು. ಮಳೆ ನೀರು ಹರಿವು ಕಡಿಮೆಯಾದ ಮೇಲೆ ಗ್ರಾಮಕ್ಕೆ ತೆರಳಿತು.ಪಟ್ಟಣ ಶೆಟ್ಟರ ಕೆರೆಯ ಹತ್ತಿರ ಇರುವ ಅಂಗಡಿಗಳ ಮೇಲಿನ ತಗಡುಗಳು ಹಾರಿ ಬಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾಹನ ಸವಾರ, ತಾಲೂಕಿನ ಕುಮಾರಗೊಪ್ಪ ಗ್ರಾಮದ ಯುವಕನ ತಲೆ ಪೆಟ್ಟಾಗಿದೆ. ತಾಲೂಕಿನ ಬೆಳಹಾರ ಗ್ರಾಮದಲ್ಲಿನ ಹೊಟ್ಟಿನ ಗೋದಾಮಿಗೆ ಸಿಡಿಲು ಬಡಿದು ಬೆಂಕಿ ಅವಘಡ ಸಂಭವಿಸಿದ್ದು, ಅಣ್ಣಿಗೇರಿಯಿಂದ ಆಗಮಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಒಟ್ಟಾರೆ ಬೇಸಿಗೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಬೇರೆ, ಬೇರೆ ಗ್ರಾಮಗಳಲ್ಲಿ ಬಸವ ಜಯಂತಿ ಹಾಗೂ ಇತರ ಸಂದರ್ಭಗಳಲ್ಲಿ ನಡೆಸಲಿರುವ ಹಾಗೂ ನಡೆಯುತ್ತಿರುವ ಗ್ರಾಮದೇವಿ ಹಾಗೂ ನಾನಾ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯುಂಟು ಮಾಡಿದೆ.