ದಿನವಿಡೀ ಸ್ವಲ್ವವೂ ಬಿಡುವು ನೀಡದೆ ಮಳೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ಹೋಬಳಿ ಸೇರಿದಂತೆ ಖಾಂಡ್ಯ, ಮೇಗುಂದಾ ಹೋಬಳಿ ಹಾಗೂ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಶುಕ್ರವಾರದಿಂದ ಆಶ್ಲೇಷ ಮಳೆ ಅಬ್ಬರ ಜೋರಾಗಿದೆ.
ಶುಕ್ರವಾರ ಬೆಳಗ್ಗಿನಿಂದ ಆಶ್ಲೇಷ ಮಳೆ ಅಬ್ಬರ ಬಿರುಸುಗೊಂಡಿದೆ. ದಿನವಿಡೀ ಸ್ವಲ್ವವೂ ಬಿಡುವು ನೀಡದೆ ಮಳೆ ಸುರಿದಿದೆ. ಮಳೆಯೊಂದಿಗೆ ಗಾಳಿ ಪ್ರಮಾಣವೂ ಹೆಚ್ಚಾಗಿದೆ. ಸೋಮವಾರದಿಂದ ಆರಂಭಗೊಂಡ ಆಶ್ಲೇಷ ಮಳೆ ಆರಂಭದಲ್ಲಿ ಮಂದ ಗತಿಯಲ್ಲಿ ಬಂದಿದ್ದು, ಇದೀಗ ಬಿರುಸಾಗಿರುವುದು ರೈತಾಪಿ ವರ್ಗಕ್ಕೆ ಸಂತಸ ತಂದಿದೆ.ಮಲೆನಾಡು ಭಾಗದಲ್ಲಿ ಇದೀಗ ಭತ್ತದ ನಾಟಿ ಭರದಿಂದ ಸಾಗಿದೆ. ಭತ್ತದ ಗದ್ದೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಮೂರ್ನಾಲ್ಕು ದಿನ ಆಶ್ಲೇಷ ಮಳೆ ಅಬ್ಬರ ಮುಂದುವರಿಯುವ ನಿರೀಕ್ಷೆಯಿದೆ. ಪ್ರತಿ ಬಾರಿಯಂತೆ ಶ್ರಾವಣ ಮಾಸ ಆರಂಭ ಹಾಗೂ ನಾಗರಪಂಚಮಿ ಸಂದರ್ಭದಲ್ಲೂ ಈ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.
ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡ ಮಳೆಗೆ ಭದ್ರಾ ನದಿಯಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದಂತೆ ಬಯಲು ನಾಡಿನವರಿಗೆ ನಿರೀಕ್ಷೆ, ಸಂತಸ ಹೆಚ್ಚಾಗಿದ್ದು, ಈ ಭಾಗದಲ್ಲಿ ಭದ್ರಾ ನದಿ ನೀರು ಏರಿಕೆಯಾಗಿ ಭದ್ರಾ ಡ್ಯಾಂ ತುಂಬಿದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಹಲವು ತಾಲೂಕುಗಳಿಗೆ ಭದ್ರೆಯ ನೀರು ಡ್ಯಾಂನಿಂದ ಬಿಡುಗಡೆಯಾಗಿ ಕೃಷಿ ಚಟುವಟಿಕೆ ನಡೆಸಲು ಪೂರಕವಾಗಲಿದೆ.
ಕಳೆದೆರಡು ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹಲವು ಯುವ ಕೃಷಿಕರ ತಂಡ ಈ ಭಾಗದ ಮಳೆ ಹಾಗೂ ಭದ್ರಾ ನದಿಯ ನೀರಿನ ಹರಿವು ವೀಕ್ಷಿಸಲು ಬಂದು ರಂಭಾಪುರಿ ಪೀಠದಲ್ಲಿ ಉತ್ತಮ ಮಳೆಗಾಗಿ ಪೂಜೆ ಸಲ್ಲಿಸಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.೦೭ಬಿಹೆಚ್ಆರ್ ೧:
ಬಾಳೆಹೊನ್ನೂರು ಸಮೀಪದ ಖಾಂಡ್ಯ ಬಳಿಯಲ್ಲಿರುವ ಬಾಳೆದ್ದೆ ತೂಗು ಸೇತುವೆ ಸಮೀಪದಲ್ಲಿ ಭದ್ರಾನದಿಯಲ್ಲಿ ಆಶ್ಲೇಷ ಮಳೆಯ ಪರಿಣಾಮ ನೀರು ಅಪಾಯಮಟ್ಟ ಮೀರಿ ಹರಿಯುತ್ತಿರುವುದು.