ಹೆಬ್ರಿ: ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಐಕ್ಯುಎಸಿ ಹಾಗೂ ಆರ್‌ಡಿ-ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್‌ನ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ಜೀವನ ಕೌಶಲ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಹಳೆ ವಿದ್ಯಾರ್ಥಿ ಮಿಥುನ್ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆರ್‌ಡಿ-ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ರಾಜೇಂದ್ರ ಕಿಣಿ ಅವರು ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾಗುತ್ತಿರುವ ಬದಲಾವಣೆಯತ್ತ ಒಂದು ಹೆಜ್ಜೆ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವ ವಿವರಿಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಕ್ಲಬ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಪಠ್ಯದ ಜೊತೆಗೆ ಜೀವನ ಕೌಶಲ್ಯಗಳೂ ಅತ್ಯಗತ್ಯವಾಗಿದ್ದು, ತರಬೇತಿಯಲ್ಲಿ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.ಒಂದು ವಾರ ನಡೆದ ಕಾರ್ಯಕ್ರಮದಲ್ಲಿ 12 ವಿವಿಧ ಕ್ಷೇತ್ರಗಳ ಪರಿಣಿತರು ಜೀವನ ಕೌಶಲ್ಯಕ್ಕೆ ಅಗತ್ಯವಾದ ತರಬೇತಿ ಹಾಗೂ ಉಪನ್ಯಾಸ ನೀಡಿದರು. ವಿದ್ಯಾರ್ಥಿ ವೇದಿಕೆಯ ಸಂಚಾಲಕಿ ಸುಷ್ಮಾ ರಾವ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಜ್ಯೋತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಐಕ್ಯುಎಸಿ ಸಂಚಾಲಕ ಡಾ. ಗಣೇಶ್ ಎಸ್. ವಂದಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಾಲಿನಿ, ಖಜಾಂಚಿ ಭಾರ್ಗವಿ ಭಟ್, ಪೂರ್ವ ಅಧ್ಯಕ್ಷ ಪಟ್ಟಾಭಿರಾಮ್, ಸದಸ್ಯ ಸಂಜೀವ, ಲಿಯೋ ಕ್ಲಬ್ ವಿದ್ಯಾರ್ಥಿ ನಾಯಕ ಆಕರ್ಷ, ಕಾರ್ಯದರ್ಶಿ ಪ್ರಜ್ಞಾ, ಖಜಾಂಚಿ ಕಾರ್ತಿಕ್, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.