ಸಾರಾಂಶ
ಮಂಗಳೂರು : ಪ್ರಾಣಿಗಳಿಗೆ ಆಶ್ರಯಧಾಮ ಆಗಬೇಕಿದ್ದ ಪಿಲಿಕುಳ ನಿಸರ್ಗಧಾಮ ಪ್ರಾಣಿಗಳಿಗೆ ನರಕ ಸದೃಶವೆನಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ವನ್ಯಜೀವಿ ಸಂರಕ್ಷಕ ಭುವನ್ ಎಂ. ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪಿಲಿಕುಳದಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ ಎಂದು ಭುವನ್ ಕಳೆದೆರಡು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಯಾವುದೇ ಕ್ರಮ ಆಗಿರಲಿಲ್ಲ. ಇದರಿಂದ ಬೇಸತ್ತ ಅವರು ತನಿಖೆ ನಡೆಸುವಂತೆ ಹೈಕೋರ್ಟ್ಗೆ ವಕೀಲ ಅಶ್ವಿನ್ ಜೋಯ್ಸ್ಟನ್ ಕುಟಿನ್ಹಾರ ಮುಖೇನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಭುವನ್ ಎಂ. ಹಾಗೂ ಅಶ್ವಿನ್ ಕುಟಿನ್ಹಾ ಅ. 31ರಂದು ಪಿಲಿಕುಳದ ನಿಸರ್ಗಧಾಮದಲ್ಲಿ ವೈಯುಕ್ತಿಕ ಸಮೀಕ್ಷೆ ನಡೆಸಿ ಪ್ರಾಣಿಗಳಿಗಾಗುವ ತೊಂದರೆ ಬಗ್ಗೆ ವರದಿ ಸಿದ್ಧಪಡಿಸಿದ್ದರು. ಈ ವೇಳೆ ಪಿಲಿಕುಳ ವನ್ಯಜೀವಿಧಾಮಕ್ಕೆ 82 ಹೆಕ್ಟೇರ್ ಭೂಮಿಗೆ ಸಿಝಡ್ಎ ಪರವಾನಿಗೆ ಪಡೆದು 30 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ವನ್ಯಜೀವಿಧಾಮ ಮಾಡಲಾಗಿದೆ. ಉಳಿದಂತೆ ವಿಜ್ಞಾನ ಕೇಂದ್ರ, ವಾಟರ್ ಪಾರ್ಕ್, ಗುತ್ತುಮನೆ, ಗಾಲ್ಫ್ ಕೋರ್ಟ್ ನಿರ್ಮಿಸಲಾಗಿದೆ ಎಂದು ಭುವನ್ ಆರೋಪಿಸಿದ್ದಾರೆ.
2019 ರ ಬಳಿಕ ಪಿಲಿಕುಳ ನಿಸರ್ಗಧಾಮ ದೆಹಲಿಯ ಸೆಂಟ್ರಲ್ ಝೂ ಅಥಾರಿಟಿಗೆ ತಮ್ಮ ಯಾವುದೇ ಮಾಸ್ಟರ್ ಪ್ಲ್ಯಾನ್ ನೀಡಿಲ್ಲ. ಯಾವುದೇ ಪ್ರಾಣಿ ಸಂಗ್ರಹಾಲಯಕ್ಕೆ ಮಾಸ್ಟರ್ ಪ್ಲ್ಯಾನ್ ಅನುಮೋದನೆ ಆಗದಿದ್ದಲ್ಲಿ ಪ್ರಾಣಿ ವಿನಿಮಯ ಮಾಡುವಂತಿಲ್ಲ. ಆ ಬಳಿಕವೂ ಇಲ್ಲಿ ನಿಯಮಬಾಹಿರವಾಗಿ ಪ್ರಾಣಿವಿನಿಮಯ ಆಗಿದೆ ಎಂದು ಭುವನ್ ಆರೋಪಿಸಿದ್ದಾರೆ.
ಭುವನ್ ಇದರ ಸಂಪೂರ್ಣ ವರದಿಯನ್ನು ಡೆಲ್ಲಿಯ ಸೆಂಟ್ರಲ್ ಝೂ ಅಥಾರಿಟಿಯ ಮೆಂಬರ್ ಸೆಕ್ರೆಟರಿ, ಅರಣ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ, ಕರ್ನಾಟಕದ ಚೀಫ್ ವೈಲ್ಡ್ ವಾರ್ಡನ್ಗೆ ಫೆಬ್ರವರಿ24 ರಂದು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಆ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಆರಂಭದಿಂದ ಇದ್ದ ನಿರ್ದೇಶಕರು ಏಕಾಏಕಿ ರಾಜಿನಾಮೆ ನೀಡಿದ್ದಾರೆ. ಅದರ ಹಿಂದೆಯೇ ಕೆಲವೊಂದು ಸಿಬ್ಬಂದಿಯೂ ರಾಜಿನಾಮೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಭುವನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜೊತೆಗೆ ಪಿಲಿಕುಳವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಸಕ್ತ ಜಿಲ್ಲಾಧಿಕಾರಿ ಅರಣ್ಯ ಇಲಾಖೆಯ ಎಸಿಎಫ್ ಅವರಿಗೆ ನಿಸರ್ಗಧಾಮವನ್ನು ನೋಡಿಕೊಳ್ಳುವ ಹೊಣೆಗಾರಿಕೆ ವಹಿಸಿದ್ದಾರೆ.