ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಮಕ್ಕಳ ಅಪಹರಣ, ಕಳ್ಳ ಸಾಗಾಣಿಕೆಗಳನ್ನು ತಡೆಗಟ್ಟುವಿಕೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ರೈಲ್ವೆ ವಲಯ ಪೊಲೀಸ್ ಠಾಣೆಯ ಎಎಸ್ಪಿಎಫ್ ತ್ರಿವಿಕ್ರಮ್ ತಿಳಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಜಸ್ಟ್ ರೈಟ್ಸ್ ಮತ್ತು ರೀಡ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಮಾನವ ಮತ್ತು ಮಕ್ಕಳ ಮಾರಾಟ ಹಾಗೂ ದೌರ್ಜನ್ಯ ತಡೆಗಟ್ಟುವಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಜನರಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಬೇಕು. ಮಕ್ಕಳನ್ನು ಅಪಹರಿಸುವ ಮತ್ತು ಅವರ ಮೇಲೆ ದೌರ್ಜನ್ಯವೆಸೆಗುವ ದೊಡ್ಡ ಜಾಲವೇ ಇದ್ದು, ಸಾರ್ವಜನಿಕರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಮಕ್ಕಳ ಸಹಾಯವಾಣಿ, ಸಂಘ ಸಂಸ್ಥೆಗಳು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸುವ ಮೂಲಕ ಮಕ್ಕಳನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.ನಂತರ ಮಾತನಾಡಿದ ರೀಡ್ ಸಂಸ್ಥೆಯ ಜಿಲ್ಲಾ ಸಂಯೋಜಕ ಮಂಜುನಾಥ್ ಎನ್, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಪಹರಣ ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರೀಡ್ ಸಂಸ್ಥೆ ಸಹಯೋಗದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಎಲ್ಲಿಯಾದರೂ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಂಡುಬಂದರೆ ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರೈಲ್ವೆ ವಲಯ ಪೊಲೀಸ್ ಠಾಣೆಯ ಎಎಸ್ಪಿಎಫ್ ನಿರ್ಮಲ್ ,ಬಪ್ಪನ್ ಕುಮಾರ್ ನಾಯಕ್, ರೀಡ್ ಸಂಸ್ಥೆಯ ಸಮುದಾಯ ಸಂಘಟಕರಾದ ಉಮೇರಾಖಾನ್, ರಂಗದಾಮಯ್ಯ ಸೇರಿದಂತೆ ರೈಲ್ವೆ ಸಿಬ್ಬಂದಿ ಉಪಸ್ಥಿತರಿದ್ದರು.