ಸಾರಾಂಶ
ಜೀವನ ದೂಡಲು ಕೂಲಿ ಕೆಲಸಕ್ಕೆ ತೆರಳಿದಾಗ ಬೊಲೆರೋ ಪಲ್ಟಿಯಿಂದ 32ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಪೈಕಿ ಲಕ್ಷ್ಮೀ ಚಂದ್ರಶೇಖರ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಕನ್ನಡಪ್ರಭ ವಾರ್ತೆ ಹುಣಸಗಿ
ಸಮೀಪದ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಬೊಲೆರೋ ವಾಹನ ಪಲ್ಟಿಯಾಗಿ ಮೃತಪಟ್ಟ ಕಾರ್ಮಿಕ ಮಹಿಳೆ ಲಕ್ಷ್ಮೀ ಚಂದ್ರಶೇಖರ ಅವರ ಮನೆಗೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಬಳಿಕ ಮಾತನಾಡಿದ ಅವರು, ಕುಟುಂಬದ ಜೀವನ ದೂಡಲು ಕೂಲಿ ಕೆಲಸಕ್ಕೆ ತೆರಳಿದಾಗ ಬೊಲೆರೋ ಪಲ್ಟಿಯಿಂದ 32ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಪೈಕಿ ಲಕ್ಷ್ಮೀ ಚಂದ್ರಶೇಖರ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಉಳಿದ ಕಾರ್ಮಿಕರು ಗಾಯಾಳುಗಳಿಂದ ನರಳಾಡುತ್ತಾ, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕ ಎಲ್ಲರೂ ಕಾರ್ಮಿಕರು ಆಗಿದ್ದರಿಂದ ಸರಕಾರವು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಕಾರ್ಮಿಕರ ನೆರವಿಗೆ ಸರಕಾರ ಸ್ಪಂದಿಸಬೇಕಿದೆ. ದೊಡ್ಡ ದುರ್ಘಟನೆ ಸಂಭವಿಸಿದರೂ ಕಾರ್ಮಿಕ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜಿಲ್ಲಾಡಳಿತ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ ಎಂದು ಆಗ್ರಹಿಸಿದ ಅವರು, ಕೂಡಲೇ ಕಾರ್ಮಿಕರ ಸಮಸ್ಯೆಗಳಿಗೆ ಇಲಾಖೆಯವರು ಸ್ಪಂದಿಸಬೇಕು. ಅಲ್ಲದೆ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಮೇಲಪ್ಪ ಗುಳಗಿ, ವೀರೇಶ ಸಾಹುಕಾರ ಚಿಂಚೋಳಿ, ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ವಿರುಪಾಕ್ಷಯ್ಯ ಸ್ಥಾವರಮಠ, ಪ.ಪಂ. ಸದಸ್ಯ ಮಲ್ಲಣ್ಣ ಹೆಬ್ಬಾಳ, ಪರಮಾನಂದ ಚಟ್ಟಿ ಸೇರಿದಂತೆ ಇತರರಿದ್ದರು.