ಅಸಹಾಯಕರಿಗೆ ಸೌಲಭ್ಯ ದೊರೆಯಲಿ: ನ್ಯಾಯಾಧೀಶ ಯಮನಪ್ಪ

| Published : Dec 10 2024, 12:33 AM IST

ಸಾರಾಂಶ

ಅಂಗವಿಕಲರು ಹಾಗೂ ಅಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವಂತಾತಬೇಕಿದೆ. ಆದರೆ, ಇಂದಿಗೂ ಹಲವು ಕಡೆಗಳಲ್ಲಿ ನ್ಯೂನತೆ ಹಾಗೂ ಅವರ ಹಕ್ಕುಗಳು ಸಮರ್ಪಕವಾಗಿ ದೊರೆಯುವಲ್ಲಿ ಕಾನೂನು ಉಲ್ಲಂಘನೆಯಾಗುತ್ತಿವೆ.

ಹುಬ್ಬಳ್ಳಿ:

ನಮ್ಮಂತೆ ಅಸಹಾಯಕರು, ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ದೊರೆಯುವಂತಾಗಬೇಕು. ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ನ್ಯೂನತೆಯಿಂದಾಗಿ ಸಮರ್ಪಕ ಸೌಲಭ್ಯ ದೊರೆಯದಿರುವುದು ನೋವಿನ ಸಂಗತಿ ಎಂದು ನ್ಯಾಯಾಧೀಶ ಕೆ. ಯಮನಪ್ಪ ಹೇಳಿದರು.

ಅವರು ಇಲ್ಲಿನ ಕೆಎಂಸಿಆರ್‌ಐನ ನೃಪತುಂಗ ಸಭಾಭವನದಲ್ಲಿ ಭಾನುವಾರ ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಜೇಥಿಯಾ ಫೌಂಡೇಶನ್, ಕಾನೂನು ಸೇವಾ ಪ್ರಾಧಿಕಾರ, ಎಐಎಂ, ಯುಥ್ ಫಾರ್ ಸೇವಾ ವತಿಯಿಂದ ಏರ್ಪಡಿಸಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂಗವಿಕಲರು ಹಾಗೂ ಅಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವಂತಾತಬೇಕಿದೆ. ಆದರೆ, ಇಂದಿಗೂ ಹಲವು ಕಡೆಗಳಲ್ಲಿ ನ್ಯೂನತೆ ಹಾಗೂ ಅವರ ಹಕ್ಕುಗಳು ಸಮರ್ಪಕವಾಗಿ ದೊರೆಯುವಲ್ಲಿ ಕಾನೂನು ಉಲ್ಲಂಘನೆಯಾಗುತ್ತಿವೆ. ಈ ಕುರಿತು ಪ್ರಜ್ಞಾವಂತರಾದ ನಾವೆಲ್ಲರೂ ಮಾನವೀಯತೆಯಿಂದ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದರೆ ಅಂತಹವರು ಎಲ್ಲರಂತೆ ಬದುಕಲು ಸಹಕಾರಿಯಾಗಲಿದೆ. ನಿರ್ಗತಿಕರು, ಅಂಗವಿಕಲರು ಹಾಗೂ ಅಸಹಾಯಕರು ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ರೀತಿಯ ಸಮಸ್ಯೆಯಾದಲ್ಲಿ ನೇರವಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಅಂತಹವರಿಗೆ ಕಾನೂನಿನ ನೆರವು ದೊರೆಯಲಿದೆ ಎಂದರು.

ನ್ಯಾಯಾಧೀಶ ಆ‌ರ್. ರಾಘವೇಂದ್ರ ಮಾತನಾಡಿ, ಅಸಹಾಯಕರ ನಡುವೆ ಬದುಕುವ ಅರ್ಹತೆ ನಮಗಿದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಮೊದಲು ನಮ್ಮನ್ನು ನಾವು ಅರಿತುಕೊಳ್ಳುವ ಕಾರ್ಯವಾಗಬೇಕಿದೆ. ಇಲ್ಲದಿದ್ದರೆ ಇಂತಹ ದಿನಾಚರಣೆಗೆ ಅರ್ಥವಿಲ್ಲ. ಅಂಗವಿಕಲರಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಪ್ರತಿಭೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ನಾವೆಲ್ಲರೂ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲರನ್ನು ಸನ್ಮಾನಿಸಲಾಯಿತು. ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷ ಜಿತೇಂದ್ರ ಮಜೇಥಿಯಾ, ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಸಿಎಒ ರಮೇಶ ಕಳಸದ, ಐಎಂಎ ಅಧ್ಯಕ್ಷ ಪ್ರಭು ಬಿರಾದಾರ, ವಿಶ್ವಧರ್ಮ ದಿವ್ಯಾಂಗ ಶಾಲೆ ಮುಖ್ಯಸ್ಥ ಐ.ಕೆ. ಲಕ್ಕುಂಡಿ, ವೈಎಫ್‌ಎಸ್‌ ಸಲಹಾ ಸಮಿತಿ ಸದಸ್ಯ ಪ್ರೊ. ಸಂದೀಪ ಬೂದಿಹಾಳ, ವಕೀಲೆ ಸವಿತಾ ಪಾಟೀಲ, ಡಾ. ವಿ.ಬಿ. ನಿಟಾಲಿ, ಡಾ. ಸುನಿಲ ಗೋಖಲೆ, ಡಾ. ನಾಗಲಿಂಗ ಮುರಗಿ ಸೇರಿದಂತೆ ಹಲವರಿದ್ದರು.