ಇಲ್ಲಿ ರಾಜ್ಯ ಹೆದ್ದಾರಿಯೇ ದನದ ಸಂತೆ ಮಾರುಕಟ್ಟೆ!

| Published : Mar 19 2025, 12:30 AM IST

ಸಾರಾಂಶ

ರಾಜ್ಯ ಹೆದ್ದಾರಿಯೇ ದನದ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ ಎಂದರೆ ನೀವು ನಂಬಲೇ ಬೇಕು. ವಾಹನಗಳಲ್ಲಿ ಜಾನುವಾರು ಹತ್ತಿಸಲು, ರಸ್ತೆ ವಿಭಜಕಗಳು ಬಳಕೆಯಾಗುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ವಾಹನಗಳಲ್ಲಿ ಜಾನುವಾರು ಹತ್ತಿಸಲು ರಸ್ತೆ ವಿಭಜಕ ಬಳಕೆಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ರಾಜ್ಯ ಹೆದ್ದಾರಿಯೇ ದನದ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ ಎಂದರೆ ನೀವು ನಂಬಲೇ ಬೇಕು. ವಾಹನಗಳಲ್ಲಿ ಜಾನುವಾರು ಹತ್ತಿಸಲು, ರಸ್ತೆ ವಿಭಜಕಗಳು ಬಳಕೆಯಾಗುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ಹೌದು. ಪಟ್ಟಣದ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡೇ ಎಪಿಎಂಸಿಗೆ ಸೇರಿದ ಜಾನುವಾರು ಸಂತೆ ಮಾರುಕಟ್ಟೆ ಇದೆ. ಇಲ್ಲಿ ಜಾನುವಾರುಗಳನ್ನು ವಾಹನಗಳಲ್ಲಿ ಹತ್ತಿಸಲು, 2 ದೊಡ್ಡ ರ್‍ಯಾಂಪ್

ಗಳನ್ನು ಮಾಡಿದ್ದರೂ ಅವುಗಳನ್ನು ಬಳಕೆ ಮಾಡದೇ, ವ್ಯಾಪಾರಸ್ಥರು ಹಾಗೂ ಖರೀದಿದಾರರು ರಾಜ್ಯ ಹೆದ್ದಾರಿಯಲ್ಲಿರುವ ರಸ್ತೆ ವಿಭಜಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ. ವಾಹನಗಳಲ್ಲಿ ಜಾನುವಾರು ಹತ್ತಿಸುವ ಸಂದರ್ಭ ರಸ್ತೆಯಲ್ಲಿ ಸಂಚಾರಿಸುವ ಸವಾರರ ಮೇಲೆ ಜಿಗಿದಾಗ ಪ್ರಾಣಕ್ಕೆ ಕುತ್ತು ತರುವ ಅಪಾಯವಿದೆ ಎಂಬ ಆತಂಕವಿದೆ.

ಇಲ್ಲಿನ ಜಾನುವಾರು ಸಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ಜಾಗವಿದೆ. ಜಾನುವಾರು ಮತ್ತು ಕುರಿ ಮೇಕೆ ಕಟ್ಟಲು ಜಾಗ ಇದ್ದರೂ, ವ್ಯಾಪಾರ ಮಾತ್ರ ರಸ್ತೆಯಲ್ಲೇ ನಡೆಯುತ್ತಿದೆ. ಇದನ್ನು ತಡೆಯಲು ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಎಪಿಎಂಸಿ ಅಧಿಕಾರಿಗಳು ಕೈ ಚೆಲ್ಲುತ್ತಾರೆ.

ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲೇ 50ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಎದುರುಗಡೆ ವಾಹನಗಳು ಬಂದಾಗ ಸರಿದುಕೊಳ್ಳಲು ಜಾಗವೇ ಇಲ್ಲದಂತೆ ಆಗುತ್ತದೆ. ಸಿಕ್ಕ ಕಡೆಗಳಲ್ಲಿ ಬೈಕ್‌ ವಾಹನಗಳನ್ನು ನಿಲುಗಡೆ ಮಾಡಿ ಸಂಚಾರಕ್ಕೆ ತೊಂದರೆ ಮಾಡುತ್ತಾರೆ ಎಂಬ ದೂರು ಕೇಳಿ ಬರುತ್ತಿದೆ.

ರಸ್ತೆಯಲ್ಲಿದ್ದ ವಾಹನ ಮತ್ತು ಜಾನುವಾರುಗಳನ್ನು ಮಾರುಕಟ್ಟೆಯ ಒಳಗೆ ಕಳಿಸಿದ್ದೇವೆ. ಆದರೂ ರಸ್ತೆ ವಿಭಜಕಗಳಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಕುರಿತು ಪೊಲೀಸ್‌ ಠಾಣೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ತಿಳಿಸಿದ್ದಾರೆ.

ಮಾರುಕಟ್ಟೆಯ ಒಳಗೆ ವಾಹನಗಳಲ್ಲಿ ಜಾನುವಾರು ಹತ್ತಿಸಿಕೊಳ್ಳಬೇಕು, ಅದು ಬಿಟ್ಟು ರಸ್ತೆಯ ಮಧ್ಯೆ ವಾಹನಗಳನ್ನು, ಪ್ರತಿ ಸೋಮವಾರ ತಂದು ನಿಲ್ಲಿಸುತ್ತಾರೆ. ಇದರಿಂದ ವಾಹನಗಳ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಪ್ರಾಣಾಪಾಯ ಆಗುವ ಮುನ್ನವೇ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ವಾಹನ ಸವಾರ ಜಗದೀಶ ಒತ್ತಾಯಿಸಿದ್ದಾರೆ.