ಸಾರಾಂಶ
ಶಿರಾ ತಾಲೂಕು ಹಾರೋಗೆರೆ ಗ್ರಾಮದ ಕೆರೆಯ ಅಂಗಳದಲ್ಲಿ ವೀರಗಲ್ಲು ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಹಾರೋಗೆರೆ ಗ್ರಾಮದ ಕೆರೆಯ ಅಂಗಳದಲ್ಲಿ ವೀರಗಲ್ಲು ಪತ್ತೆಯಾಗಿದೆ. ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಾದ ಡಾ.ಗುರುರಾಜ್ ಪ್ರಭು.ಕೆ. ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿ ಮಹಾಲಿಂಗೇಗೌಡ.ಜಿ, ಇವರು ಸಂಶೋಧನಾ ಕ್ಷೇತ್ರ ಕಾರ್ಯ ಕೈಗೊಂಡಾಗ ಹಾರೋಗೆರೆ ಕೆರೆಯ ಅಂಗಳದಲ್ಲಿ ಮಣ್ಣಿನಲ್ಲಿ ಉದುಗಿ ಹೋಗಿದ್ದ ಕಲ್ಲುಗಳನ್ನು ಗ್ರಾಮದ ಯತೀಶ್ ಹಾಗೂ ರಾಜಣ್ಣ ಇವರ ಸಹಕಾರದೊಂದಿಗೆ ಹೊರ ತೆಗೆದು ಅವುಗಳನ್ನು ಸ್ವಚ್ಛಗೊಳಿಸಿ ನೋಡಿದಾಗ ಅವು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಎಂದು ತಿಳಿದುಬಂದಿದೆ. ಒಂದು ವೀರಗಲ್ಲಿನಲ್ಲಿ ಬರವಣಿಗೆ ಇದ್ದು ಇದರಲ್ಲಿರುವ ಬರವಣಿಗೆ ಪ್ರಾಚೀನ ಕಾಲದಾಗಿದ್ದು, ಇದರಲ್ಲಿರುವ ಅಕ್ಷರಗಳ ಭಾಷೆ, ಲಿಪಿ ಅಸ್ಪಷ್ಟವಾಗಿದ್ದು, ಇದಕ್ಕೆ ಶಾಸನ ತಜ್ಞರ ಸಹಾಯವನ್ನು ಪಡೆದು ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.