ಸಾರಾಂಶ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಸ್ಕಾಂನವರು ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ಕತ್ತಲೆಯ ಬೋನಸ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಸವದತ್ತಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಸ್ಕಾಂನವರು ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ಕತ್ತಲೆಯ ಬೋನಸ್ ನೀಡಿದ್ದಾರೆ.ಪಟ್ಟಣದ ಸರ್ಕಾರಿ ಇಲಾಖೆಗಳು ಹೆಸ್ಕಾಂಗೆ ತುಂಬಬೇಕಾದ ವಿದ್ಯುತ್ ಬಿಲ್ ನ್ನು ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡ ಕಾರಣ ಬುಧವಾರ ಹೆಸ್ಕಾಂ ಇಲಾಖೆ ಮೇಲಧಿಕಾರಿಗಳು ದಾಳಿ ನಡೆಸಿ ವಿವಿಧ ಇಲಾಖೆಯ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದ್ದಾರೆ.
ಹೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ಸಂದಾಯ ಮಾಡುವ ನಿಟ್ಟಿನಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ೩೦ ದಿನಗಳಗಿಂತ ಮೇಲ್ಪಟ್ಟ ಬಾಕಿ ಪಾವತಿಸದ ಎಲ್ಲ ವಿದ್ಯುತ್ ಸ್ಥಾವರಗಳ ವಿದ್ಯುತ್ ನಿಲುಗಡೆ ಮಾಡಬೇಕೆಂದು ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ.ಬುಧವಾರ ಸವದತ್ತಿ ಹೆಸ್ಕಾಂ ಉಪ ಶಾಖೆಯ ವ್ಯಾಪ್ತಿಗೆ ಒಳಪಡುವ ಸವದತ್ತಿ ಪಟ್ಟಣದ ಸರ್ಕಾರಿ ಕಚೇರಿಗಳಾದ ವೀನುಗಾರಿಕೆ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರವಾಸಿ ಮಂದಿರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಖಾಸಗಿ ಕಾಲೇಜುಗಳು ಮತ್ತು ಹಲವಾರು ವಾಣಿಜ್ಯ ಮಳಿಗೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಶಾಖಾಧಿಕಾರಿಗಳು ಹಾಗೂ ಹೆಸ್ಕಾಂನ ಸಿಬ್ಬಂದಿ ವಿದ್ಯುತ್ ಬಿಲ್ ಬಾಕಿಯಿರುವಂತ ಗ್ರಾಹಕರ ಸ್ಥಾವರಗಳ ವಿದ್ಯುತ್ ಕಡಿತಗೊಳಿಸಲು ಕಾರ್ಯಪ್ರವರ್ತರಾಗಿದ್ದರು.