ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಲು ಎರಡು ಬಾರಿ ಪೊಲೀಸರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಅಸೋಸಿಯೇಶನ್ ಅಧ್ಯಕ್ಷ ಕಾಂತಕುಮಾರ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಧಾರವಾಡ:

ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವುದು, ಸರ್ಕಾರಿ ಹುದ್ದೆಗೆ ಬೇಕಾದ ವಯೋಮಿತಿಯಲ್ಲಿ ಸಡಿಲಿಕೆ ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸುವಂತೆ ಎರಡ್ಮೂರು ಬಾರಿ ಪ್ರತಿಭಟನೆಗೆ ಸಜ್ಜಾಗಿ ಪೊಲೀಸ್‌ ಪರವಾನಗಿ ಸಿಗದೇ ಹೈಕೋರ್ಟ್‌ ಮೊರೆ ಹೋಗಿದ್ದ ವಿದ್ಯಾರ್ಥಿ ಮುಖಂಡರಿಗೆ ಇಲ್ಲಿಯ ಹೈಕೋರ್ಟ್‌ ಪೀಠವು ಮುಖ್ಯಮಂತ್ರಿ ಭೇಟಿ ಮಾಡಲು ಸೂಚಿಸಿ ಆದೇಶಿಸಿದೆ.

ಈ ಸಂಬಂಧ ಅರ್ಜಿದಾರರು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಅವರ ಮೂಲಕ ಮುಖ್ಯಮಂತ್ರಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಲು ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಆದೇಶಿಸಿತು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಲು ಎರಡು ಬಾರಿ ಪೊಲೀಸರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಅಸೋಸಿಯೇಶನ್ ಅಧ್ಯಕ್ಷ ಕಾಂತಕುಮಾರ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಉದ್ಯೋಗಾಕಾಂಕ್ಷಿಗಳ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕೊಡಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದರು.

ಭತ್ಯೆ ನೀಡಿಯೂ ಶಾಸಕರಿಗೆ ಊಟ ಏಕೆ?:ಬೆಳಗಾವಿ ಅಧಿವೇಶನದ ವೇಳೆ ಶಾಸಕರಿಗೆ ಸರ್ಕಾರ ಭತ್ಯೆ ನೀಡಿದ ಮೇಲೂ ಅವರಿಗೆ ಊಟದ ವ್ಯವಸ್ಥೆ ಏಕೆ ಮಾಡಲಾಗುತ್ತಿದೆ? ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುವುದಲ್ಲವೇ ಎಂದು ಪ್ರಶ್ನಿಸಿ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಹೈಕೋರ್ಟ್‌ ಮೆಟ್ಟಿಲೇರಿದ್ದರು.ಈ ವಿಚಾರವಾಗಿ ಸೋಮವಾರ ಧಾರವಾಡ ಹೈಕೋರ್ಟ್‌ ಏಕಸದಸ್ಯ ಪೀಠವು ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಸರ್ಕಾರ ಅಧಿವೇಶನದ ವೇಳೆ ಶಾಸಕರಿಗೆ ಭತ್ಯೆ ಕೊಡುತ್ತದೆ. ಹೀಗಿದ್ದರೂ ಅವರಿಗೆ ಉಚಿತ ಊಟ ನೀಡುತ್ತಿರುವುದು ಏಕೆ? 2006ರಿಂದ ಈ ವರೆಗೆ ನಡೆದ ಅಧಿವೇಶನದ ವೇಳೆ ಶಾಸಕರಿಗೆ ನೀಡಿದ ಭತ್ಯೆ ವಾಪಸ್ ಪಡೆಯಬೇಕು ಎಂದು ಭೀಮಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದೀಗ ನ್ಯಾಯಮೂರ್ತಿ ಎಂ. ನಾಗಪ್ರಸನ್‌ ಅವರಿದ್ದ ಏಕಸದಸ್ಯ ಪೀಠ ಸರ್ಕಾರಕ್ಕೆ ಈ ಬಗ್ಗೆ ನೋಟಿಸ್‌ ಜಾರಿ ಮಾಡಿದೆ.