ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಅಖಿಲ ಭಾರತ ಮೀಸಲಾತಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಶಿವರುದ್ರಯ್ಯ ಸ್ವಾಮಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಅಖಿಲ ಭಾರತ ಮೀಸಲಾತಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಶಿವರುದ್ರಯ್ಯ ಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಮಧ್ಯವರ್ತಿ ಕೇಂದ್ರ ಸ್ಥಾನವಾಗಿರುವ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ನಗರ ಕರಾವಳಿ ಮತ್ತು ಒಳನಾಡು ಮಧ್ಯ ಕರ್ನಾಟಕದಲ್ಲಿ ಕೇಂದ್ರ ಭಾಗದಲ್ಲಿದ್ದು, ಹೈಕೊರ್ಟ್ ಪೀಠಕ್ಕೂ ಅರ್ಹವಾದ ಭೌಗೋಳಿಕ ಪ್ರದೇಶವಾಗಿದೆ. ರಾಜಧಾನಿ ಬೆಂಗಳೂರಿಗೆ ಮತ್ತು ಉತ್ತರ ಕರ್ನಾಟಕದ ಎಲ್ಲಾ ನಗರಗಳ ಪ್ರವೇಶಕ್ಕೆ ಹೆದ್ದಾರಿಯಾಗಿ ಮಲೆನಾಡು ಮತ್ತು ಕರಾವಳಿಗೆ ಹೆಬ್ಬಾಗಿಲು ಎಂದು ಪ್ರಸಿದ್ದಿಯಾಗಿದೆ. ಇಲ್ಲಿಂದ ರಾಜ್ಯದೆಲ್ಲೆಡೆ ತೆರಳಲು ರೈಲು, ವಿಮಾನ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮಾರ್ಗವಿದೆ. ಅತ್ಯುತ್ತಮ ಹವಾಗುಣ, ಸುಸಜ್ಜಿತ ನಗರ ಸೌಲಭ್ಯ, ವೈದ್ಯಕೀಯ ಕಾಲೇಜು, ಕುವೆಂಪು ವಿಶ್ವವಿದ್ಯಾಲಯ ಹೊಂದಿರುವ ಶಿವಮೊಗ್ಗ ನಗರ ಸುಪ್ರಸಿದ್ದ ನಗರ ಕೂಡ ಆಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿದ್ದು, ಹೆಸರಾಂತ ನ್ಯಾಯಾವಾದಿಗಳು ಶಿವಮೊಗ್ಗದಲ್ಲಿದ್ದಾರೆ. ಕಕ್ಷಿದಾರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐದು ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡು ಪೀಠ ಸ್ಥಾಪಿಸುವುದರಿಂದ ಕಕ್ಷಿದಾರರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಹಾಗೂ ನ್ಯಾಯವಾದಿಗಳು ಪ್ರಕರಣದ ವಾದ ಮಂಡಿಸಲು ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಆದರಿಂದ ಶಿವಮೊಗ್ಗದಲ್ಲೆ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಜೆಡಿಯು ರಾಜ್ಯ ಉಪಾಧ್ಯಕ್ಷ ಕೆ.ವಿ.ಶಿವರಾಮ್ ಮಾತನಾಡಿ, ಶಿವಮೊಗ್ಗದಲ್ಲಿ ಪೀಠ ಸ್ಥಾಪಿಸುವಂತೆ ಈಗ ನಡೆಯುತ್ತಿರುವ ಅನಿರ್ದಿಷ್ಠಾವಧಿ ಹೋರಾಟಕ್ಕೆ ಜೆಡಿಯು ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ನೂತನವಾಗಿ ರಚನೆಯಾಗುವ ಸಂಪುಟವು ಆಯೋಗ ಶಿಫಾರಸ್ಸು ಮಾಡಿರುವ ಶೇ.42 ರ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಲು ತಮಿಳುನಾಡು ಮಾದರಿಯಲ್ಲಿ ಸಂವಿಧಾನದ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರವಿ ಕಿಶನ್, ಶಶಿಕುಮಾರ್ ಗೌಡ, ತಿಪ್ಪೇಶಪ್ಪ, ಎಸ್.ಡಿ.ರಂಗನಾಥ್ ಹಾಜರಿದ್ದರು.