ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕಳೆದ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸಿದ್ದ ಮುಳಬಾಗಿಲು ಎಸ್ಸಿ ಮೀಸಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ (ಕೋಲಾರ ಹಾಲಿ ಶಾಸಕ) ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ಚುನಾವಣೆ ಸಂದರ್ಭದಲ್ಲಿ ಸುಳ್ಳು ಜಾತಿ ಪತ್ರ ಸಲ್ಲಿಸಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಪರಿಶಿಷ್ಟ ಜಾತಿಗಳಿಗೆ ವಂಚಿಸಿದ್ದಾರೆ ಎಂಬುದು ವಿಚಾರಣೆಯಲ್ಲಿ ರುಜುವಾತುವಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಿದೆ.
ಕೊತ್ತೂರು ಮಂಜುನಾಥ್ ಬುಡ್ಗ ಜಂಗಮ (ಎಸ್.ಸಿ) ಸಮುದಾಯಕ್ಕೆ ಸೇರಿದವರಲ್ಲ. ಅವರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಬೈರಾಗಿ ಜಾತಿಗೆ ಸೇರಿದವರು ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವರದಿ ನೀಡಿದೆ. ಈ ವರದಿಯ ವಿರುದ್ಧ ಮಂಜುನಾಥ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.ಪ್ರಕರಣದ ಹಿನ್ನೆಲೆ:ಕೋಲಾರ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಕೊತ್ತೂರು ಮಂಜುನಾಥ್ ೨೦೧೩ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಈ ಸಂದರ್ಭದಲ್ಲಿ ಅವರು ತಾವು ಬುಡ್ಗಜಂಗಮ (ಎಸ್.ಸಿ) ಸಮುದಾಯಕ್ಕೆ ಸೇರಿದವರು ಎಂದು ಜಾತಿ ಪ್ರಮಾಣ ಪತ್ರ ಚುನಾವಣೆ ಆಯೋಗಕ್ಕೆ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಆದರೆ ಅವರು ಎಸ್.ಸಿ. ಸಮುದಾಯಕ್ಕೆ ಸೇರಿದವರಲ್ಲ ಎಂದು ಆರೋಪಿಸಲಾಗಿತ್ತು, ಈ ಸಂದರ್ಭದಲ್ಲಿ ತಾವು ಬುಡ್ಗಜಂಗಮ ಸಮುದಾಯಕ್ಕೆ ಸೇರಿದವರು ಎಂಬುದನ್ನು ಸಾಬೀತು ಪಡಿಸಲು ಮಂಜುನಾಥ್ ವಿಫಲರಾಗಿದ್ದರು, ಈ ಹಿನ್ನೆಲೆಯಲ್ಲಿ ಅವರು ಶಾಸಕತ್ವವನ್ನು ೨೦೧೮ರ ಏಪ್ರಿಲ್ ಮಾಹೆಯಲ್ಲಿ ಆಸಿಂಧು ಎಂದು ಹೈಕೋರ್ಟ್ ಘೋಷಿಸಿ ತೀರ್ಪು ನೀಡಿತು.ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಂಜುನಾಥ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಜಾತಿ ಪ್ರಮಾಣ ಪತ್ರ ಪರಿಶೀಲನೆ ಸುಪ್ರೀಂ ಕೋರ್ಟ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಜವಾಬ್ದಾರಿ ನೀಡಿತು. ಈ ಸಂಬಂಧ ವಿಚಾರಣೆ ನಡೆಸಿದ ಸಮಿತಿ ಮಂಜುನಾಥ್ ಬುಡ್ಗಜಂಗಮ ಜಾತಿಗೆ ಸೇರಿದವರಲ್ಲ ಅವರು ಹಿಂದುಳಿದ ವರ್ಗಗಳ ಬೈರಾಗಿ ಜಾತಿಗೆ ಸೇರಿದವರಾಗಿದ್ದಾರೆ ಎಂದು ವರದಿ ನೀಡಿತು.
ಸಮಿತಿಯ ವರದಿ ಪ್ರಶ್ನಿಸಿ ಮತ್ತು ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಅವರ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯವು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದೆ.