ಸಹಕಾರ ಇಲಾಖೆಯ ಮೇಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿಯ ವರ್ತನೆಯನ್ನು ಪ್ರದರ್ಶಶಿಸುತ್ತಿದ್ದಾರೆ. ಗುರುವಾರ ಮಧ್ಯಾಹ್ನ 12ಗಂಟೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ರೈತರೊಂದಿಗೆ ಶಾಖೆಗೆ ಮುತ್ತಿಗೆ ಹಾಕಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸೂಪರ್ ಸೀಡ್ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರತಿ ಸ್ವೀಕರಿಸದ ಎಂಡಿಸಿಸಿ ಬ್ಯಾಂಕ್ ನ ಮಳವಳ್ಳಿಯ ಶಾಖೆಯ ವ್ಯವಸ್ಥಾಪಕ ಶಿವರಾಮು ವಿರುದ್ಧ ಕೆಎಂಎಫ್ ಮಾಜಿ ನಿರ್ದೇಶಕ ವಿ.ಎಂ.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಎಂಡಿಸಿಸಿ ಬ್ಯಾಂಕ್ ನ ಶಾಖೆಗೆ ಸಂಘದ ಸದಸ್ಯರೊಂದಿಗೆ ಬುಧವಾರ ಭೇಟಿ ನೀಡಿದ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿರುವ ಅವರು, ಕಳೆದ ಎರಡು ತಿಂಗಳ ಹಿಂದೆ ನಮ್ಮ ಆಡಳಿತ ಮಂಡಳಿಯನ್ನು ಸಹಕಾರ ಇಲಾಖೆಯ ಅಧಿಕಾರಿಗಳು ಸೂಪರ್ ಸೀಡ್ ಮಾಡಿ ಆದೇಶಿಸಿದ್ದರು.
ನಂತರ ಆಡಳಿತಾಧಿಕಾರಿಯನ್ನು ನೇಮಿಸಿದ್ದರು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರೂ ಅಧಿಕಾರಿಗಳು ಕ್ಯಾರೇ ಎನ್ನದೇ ಕೆಎಟಿಗೆ ಹೋಗಿದ್ದರು. ಇದೀಗ ಕೆಎಟಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆಡಳಿತ ಮಂಡಳಿಗೆ ಅಧಿಕಾರ ನೀಡಿದೆ ಎಂದರು.ಕಳೆದ ಎರಡು ತಿಂಗಳಿಂದ ಸಹಕಾರ ಸಂಘದ ಹಾಲು ಉತ್ಪಾದಕರಿಗೆ ಹಾಲಿನ ಹಣ ನೀಡಿಲ್ಲ, ರೈತರು ಪ್ರತಿನಿತ್ಯ ಕಚೇರಿಗೆ ಅಲೆದಾಟ ನಡೆಸುತ್ತಿದ್ದಾರೆ. ಸಂಘದ ಅಧ್ಯಕ್ಷನಾದ ನನ್ನ ಚೆಕ್ ಗಳನ್ನು ಎಂಡಿಸಿಸಿ ಬ್ಯಾಂಕ್ ನ ಮಳವಳ್ಳಿಯ ಶಾಖೆಯಲ್ಲಿ ಸ್ವೀಕರಿಸದ ಹಿನ್ನೆಲೆಯಲ್ಲಿ ರೈತರ ಖಾತೆಗೆ ಹಣ ಜಮಾವಾಗುತ್ತಿಲ್ಲ, ನ್ಯಾಯಾಲಯದ ಆದೇಶ ಪ್ರತಿಯನ್ನು ಸ್ವೀಕರಿಸದೇ ವ್ಯವಸ್ಥಾಪಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕಿಡಿ ಕಾಡಿದರು.
ಸಹಕಾರ ಇಲಾಖೆಯ ಮೇಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿಯ ವರ್ತನೆಯನ್ನು ಪ್ರದರ್ಶಶಿಸುತ್ತಿದ್ದಾರೆ. ಗುರುವಾರ ಮಧ್ಯಾಹ್ನ 12ಗಂಟೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ರೈತರೊಂದಿಗೆ ಶಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಎಂಡಿಸಿಸಿ ಬ್ಯಾಂಕ್ ನ ಮಳವಳ್ಳಿಯ ಶಾಖೆಯ ವ್ಯವಸ್ಥಾಪಕ ಶಿವರಾಮು ಪ್ರತಿಕ್ರಿಯಿಸಿ, ನ್ಯಾಯಾಲಯ ಆದೇಶ ಪ್ರತಿ ಸ್ವೀಕರಿಸುವ ಹಾಗೂ ಮುಂದಿನ ಕ್ರಮ ವಹಿಸುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ಹೇಳಿದರು.