ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ನಾಗೇನಹಳ್ಳಿ ಹಾಗೂ ಶ್ರೀರಂಗಪುರ ತಾಂಡಗಳಲ್ಲಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ತಾಲೂಕಿನ ನಾಗೇನಹಳ್ಳಿಯ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆಯಲಾಗಿದ್ದು, ಅಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ. ಈ ಸಂಬಂಧ ಇಂದು ನಾಗೇನಹಳ್ಳಿಗೆ ಭೇಟಿ ನೀಡಿದ್ದ ತಹಸೀಲ್ದಾರ್ ವರದರಾಜು ಹಾಗೂ ಆರೋಗ್ಯಾಧಿಕಾರಿ ಡಾ. ಕಿರಣ್ ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಆ.18ರಂದು ನಾಗೇನಹಳ್ಳಿಯ ಲಂಬಾಣಿ ತಾಂಡದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ್ದ ಸುಮಾರು 20 ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಪಾವಗಡಕ್ಕೆ ಆಗಮಿಸಿ ಚಿಕಿತ್ಸೆ ಪಡೆದು ಮರಳಿದ್ದರು. ಆದರೆ ಮತ್ತೆ ತಾಂಡಾದಲ್ಲಿ ವಾಂತಿಭೇದಿ ಹೆಚ್ಚಿದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ 24ಗಂಟೆ ಸೇವೆ ಸಲ್ಲಿಸಲು ತಾತ್ಕಾಲಿಕವಾಗಿ ಒಬ್ಬ ವೈದ್ಯ ಹಾಗೂ ನಾಲ್ಕು ಮಂದಿ ನರ್ಸ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೋಮವಾರ 20ಮಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಬಿಟ್ಟರೆ ಆ.20ರಂದು ಮಂಗಳವಾರ ಯಾವುದೇ ಹೊಸ ಪ್ರಕರಣ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಸ್ಯೆಗೆ ತಿಳಿಯದ ಕಾರಣಕಳೆದ ಶುಕ್ರವಾರದಿಂದಲೇ ತಾಲೂಕಿನ ಅನೇಕ ಗ್ರಾಮಗಳಿಂದ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಪಾವಗಡದ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದು ಆನೇಕ ಮಂದಿ ರೋಗಿಗಳು ತುಮಕೂರು, ಬೆಂಗಳೂರು ಮತ್ತು ಆಂಧ್ರದ ಹಿಂದೂಪುರಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ನಾಗೇನಹಳ್ಳಿ ತಾಂಡಾ ಮತ್ತು ಶ್ರೀರಂಗಪುರ ತಾಂಡಾದಲ್ಲಿ ಘಟನೆ ನಡೆದು ನಾಲೈದು ದಿನಗಳು ಕಳೆದರೂ ವಾಂತಿಭೇದಿ ಯಾವ ಕಾರಣಕ್ಕೆ ಆಗುತ್ತಿದೆ ಎಂಬುದು ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಆರು ತಿಂಗಳ ಮುನ್ನ ವಿವಾಹ ಕಾರ್ಯಕ್ರಮಕ್ಕಾಗಿ ಖರೀದಿಸಿದ್ದ ಅಕ್ಕಿ ಬೇಳೆ ಇತರೆ ಸಾಮಗ್ರಿಗಳು ವಿವಾಹದ ಅಡುಗೆಗೆ ಬಳಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಆದರೆ ಗ್ರಾಮದ ಕೆಲವರ ಪ್ರಕಾರ ಕಳ್ಳಭಟ್ಟಿ ಸಾರಾಯಿ ಸೇವನೆ ಹಾಗೂ ಇತರೆ ಸ್ಥಳೀಯ ಮದ್ಯ ಸೇವನೆಯಿಂದಾಗಿ ಹೀಗಾಗಿರಬಹುದು ಎಂದು ಅನುಮಾನಿಸಿದ್ದಾರೆ. ಈ ಸಂಬಂಧ ಮಲ, ಮೂತ್ರ ಹಾಗೂ ರಕ್ತ ಮಾದರಿಗಳನ್ನು ಲ್ಯಾಬಿಗೆ ಕಳುಹಿಸಲಾಗಿದ್ದು ವರದಿ ಬಂದ ನಂತರವೇ ಕಾರಣ ತಿಳಿದುಬರಲಿದೆ. ಇನ್ನೂ ಈ ಸಂಬಂಧ ಜಿಪಂನ ಎಇಇ ಸುರೇಶ್, ಕುಡಿಯುವ ನೀರು ಮತ್ತು ರ್ನೈಮಲ್ಯ ಇಲಾಖೆ ಅಧಿಕಾರಿ ಹನುಮಂತಪ್ಪ ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ, ಪಿಡಿಒ ಸುದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದು ಶುದ್ಧ ಕುಡಿಯುವ ನೀರು ಸರಬರಾಜಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ರಾಪ್ಟೆ ಗ್ರಾಪಂ ಅಧ್ಯಕ್ಷೆ ಕಲಾಬಾಯಿ ರಮೇಶ್ನಾಯ್ಕ್ ಹಾಗೂ ಮುಖಂಡ ಶಂಕರನಾಯ್ಕ್ ಇತರೆ ಆನೇಕ ಮಂದಿ ಇದ್ದರು.