ಕನ್ನಡಪ್ರಭ ವಾರ್ತೆ, ಕಲಬುರಗಿ/ಬೆಂಗಳೂರು

ಕಲಬುರಗಿ, ರಾಯಚೂರು, ವಿಜಯಪುರ ಸೇರಿ ಉತ್ತರ ಕರ್ನಾಟಕದ ಬಹುತೇಕ ಕಡೆ ಉಷ್ಣ ಹವೆ ಮುಂದುವರಿದಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ, 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಬುಧವಾರ ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದೆ. ಹೀಗಾಗಿ, ಇಡೀ ಕಲಬುರಗಿ ಜಿಲ್ಲೆಯೇ ಬುಧವಾರ ಇಡೀ ದಿನ ಬಿಸಿಲಿಗೆ ಕಾದು ಕೆಂಡವಾಗಿತ್ತು.

ಸಾಮಾನ್ಯವಾಗಿ ಈ ಪರಿಯ ತಾಪಮಾನ ಮೇ ತಿಂಗಳಲ್ಲಿ ದಾಖಲಾಗುತ್ತಿತ್ತು. ಆದರೆ, ಈ ಬಾರಿ 1 ತಿಂಗಳ ಮುಂಚೆಯೇ ಉಷ್ಣಾಂಶ ಜಿಲ್ಲೆಯಲ್ಲಿ ಏಕಾಏಕಿ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿರೋದು ಆತಂಕ ಮೂಡಿಸಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕಲಬುರಗಿಯಲ್ಲಿ (ಜಿಲ್ಲೆಯ ಅವರಾದದಲ್ಲಿ) ಬುಧವಾರ ದಾಖಲೆಯ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕಲಬುರಗಿಯ ಈ ಬೇಸಿಗೆಯ ಅತಿ ಹೆಚ್ಚಿನ ತಾಪಮಾನ ಇದಾಗಿದೆ.

ಇದೇ ವೇಳೆ, ವಿಜಯಪುರ, ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳ, ಬೀದರ್‌, ಬಾಗಲಕೋಟೆ, ಗದಗದಲ್ಲಿ 39 ಡಿಗ್ರಿ ಸೆಲ್ಸಿಯಸ್‌, ಧಾರವಾಡ, ಚಿತ್ರದುರ್ಗದಲ್ಲಿ 38 ಡಿಗ್ರಿ ಸೆಲ್ಸಿಯಸ್‌, ಶಿವಮೊಗ್ಗ, ಹಾವೇರಿ, ದಾವಣಗೆರೆ, ಬೆಂಗಳೂರು, ಮೈಸೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.


ವಿಪರೀತ ಬಿಸಿಲು, ಸೆಖೆ, ಝಳದಿಂದಾಗಿ ಕಲಬುರಗಿ ಜಿಲ್ಲಾಡಳಿತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಬೆಳಗ್ಗೆ 11ರಿಂದ ಮನೆಯಿಂದ ವಿನಾಕಾರಣ ಹೊರಗೆ ಬಾರದಂತೆ ಜನತೆಗೆ ಜಿಲ್ಲಾಡಳಿತ ಮನವಿ ಮಾಡಿದೆ. ಹೆಚ್ಚಿನ ನೀರು ಸೇವನೆ, ನೆರಳಲ್ಲೇ ಹೆಚ್ಚಿನ ಸಮಯ ಕಳೆಯುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹೇಳಿದೆ.

ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಏ.15 ರಿಂದ ಏ.17ರ ವರೆಗೂ ಉಷ್ಣ ಅಲೆ ಬೀಸಲಿರುವ ಬಗ್ಗೆ ಮುಂಜಾಗ್ರತೆ ನೀಡಲಾಗಿತ್ತಾದರೂ ಏಕಾಏಕಿ ತಾಪಮಾನ ಈ ಪರಿ ಹೆಚ್ಚಿರೋದರಿಂದಾಗಿ ಜನಜೀವನ ತತ್ತರಿಸಿದೆ. ಬೆಳಗ್ಗೆ 8 ಆಗುತ್ತಿದ್ದಂತೆ ಬಿಸಿಲು ಶುರುವಾಗುತ್ತಿದ್ದು, ಉರಿ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಸ್ತೆಗಳು ಬೀಕೋ ಎನ್ನುತ್ತಿವೆ. ಸಂಜೆ 6 ಗಂಟೆ ಬಳಿಕ, ಬಿಸಿಲು ತಗ್ಗಿದ ನಂತರವೇ ಜನ ಮನೆಯಿಂದ ಹೊರ ಬೀಳುತ್ತಿದ್ದಾರೆ.