ಮಂಗಳೂರು: ಶಾಲಾ-ಕಾಲೇಜುಗಳಲ್ಲಿ ಮತ್ತೆ ಹಿಜಾಬ್ ಧರಿಸಲು ಅವಕಾಶ ನೀಡಿರುವ ಸರ್ಕಾರದ ಆದೇಶಕ್ಕೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್‌ಗೆ ಅವಕಾಶ ಕೊಡುವ ಮೂಲಕ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ಈ ಮೂಲಕ ಮುಸ್ಲಿಂ ಮುಖಂಡರನ್ನು ಓಲೈಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಅ‍ವರು, ಹಿಜಾಬ್‌ನ್ನು ಹಿಂದಿನ ಬಿಜೆಪಿ ಸರ್ಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಿಷೇಧಿಸಿತ್ತು. ಇದೀಗ ಮತ್ತೆ ಶಾಲಾ-ಕಾಲೇಜುಗಳಲ್ಲಿ ಇದಕ್ಕೆ ಅವಕಾಶ ನೀಡಿರುವುದು ತಪ್ಪು. ಹಿಜಾಬ್ ವಿಚಾರದ ನಿಷೇಧವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೈಕೋರ್ಟ್ ಆದೇಶ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಿರುವಾಗ ಈ ವಿಚಾರವನ್ನು ಮತ್ತೆ ಮುನ್ನಲೆಗೆ ತರುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಈ ವಿವಾದವನ್ನು ಮತ್ತೆ ಎಳೆದು ತಂದಿದ್ದಾರೆ. ತಮ್ಮ ಸೀಟು ಅಲುಗಾಡುತ್ತಿರುವ ಕಾರಣಕ್ಕೆ ಈ ವಿವಾದಕ್ಕೆ ಮತ್ತೆ ಅವಕಾಶ ನೀಡಲಾಗಿದೆ. ಹಿಜಾಬ್ ಒಂದು ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ನ್ಯಾಯಾಲಯವೇ ಹೇಳಿದೆ. ಹೀಗಿರುವಾಗ ಹಿಜಾಬ್‌ಗೆ ಅವಕಾಶ ನೀಡುವ ಅಗತ್ಯವೇನಿತ್ತು? ಈ ಹಿಂದೆ ಹಿಜಾಬ್ ಹಾಕಿದ ಸಂದರ್ಭದಲ್ಲಿ ಹಿಂದುಗಳು ಕೇಸರಿ ಶಾಲನ್ನು ಹಾಕಿಕೊಂಡು ಬಂದಿದ್ದರು. ಇದೇ ಬೆಳವಣಿಗೆ ರಾಜ್ಯದಲ್ಲಿ ಮತ್ತೆ ಆರಂಭಗೊಳ್ಳಲಿದೆ.‌ ಹಿಂದುಗಳಿಗೂ ಕೇಸರಿ ಶಾಲು ಹಾಕಲು ಅವಕಾಶ ಕೊಡುತ್ತೀರಾ ಎಂದು ಸರ್ಕಾರವನ್ನು ಅವರು ಪ್ರಶ್ನಿಸಿದರು. ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಭೇದ ತರಲು ಈ ಆದೇಶ ಕಾರಣವಾಗುತ್ತದೆ. ಇದು ಪ್ರತ್ಯೇಕತೆಗೆ ಅವಕಾಶ ಮಾಡಿಕೊಡುತ್ತಿದೆ. ಇಂದು ಹಿಜಾಬ್, ನಾಳೆ ಷರಿಯಾ, ಮತ್ತೆ ಪ್ರತ್ಯೇಕ ದೇಶ ಎನ್ನುವ ಮಾತೂ ಬರಬಹುದು. ಸರ್ಕಾರ ಜನಿವಾರ, ರುದ್ರಾಕ್ಷವನ್ನು ಹಿಜಾಬ್‌ನೊಂದಿಗೆ ಹೋಲಿಸುವ ಪ್ರಯತ್ನ ಮಾಡುತ್ತಿದೆ. ಜನಿವಾರ, ರುದ್ರಾಕ್ಷವನ್ನು ಬಟ್ಟೆಯ ಒಳಗಡೆ ಹಾಕಲಾಗುತ್ತದೆ. ವಿಶ್ವದಲ್ಲಿ ಹಿಜಾಬ್ ವಿರುದ್ಧ ಹೋರಾಟ ನಡೆಯುತ್ತಿದೆ‌. ವಿಶ್ವದಲ್ಲಿ ಎರಡು ಹೆಜ್ಜೆ ಮುಂದೆ ಕರ್ನಾಟಕದಲ್ಲಿ ಎರಡು ಹೆಜ್ಜೆ ಹಿಂದೆ ಹೋಗುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಕಿಡಿಕಾರಿದರು‌.